ಗೋಕಾಕ : ಮುಂದಿನ ವಾರ ಜರುಗಬೇಕಿದ್ದ ತನ್ನ ಮದುವೆಗೆ ಪಂಜಾಬಿನಿಂದ ರೈಲಿನಲ್ಲಿ ಆಗಮಿಸುತ್ತಿದ್ದ ಯೋಧ ಹೃದಯಘಾತದಿಂದ ಸಾವಿಗೀಡಾದ ಘಟನೆ ಗುರುವಾರ (ಜೂನ್ 8) ರಂದು ಸಂಭವಿಸಿದೆ.
ಗೋಕಾಕ ತಾಲೂಕಿನ ಕನಸಗೇರಿ ಗ್ರಾಮದ 28 ವರುಷದ ಯೋಧ ಕಾಶಿನಾಥ ಕೃಷ್ಣಪ್ಪ ಶಿಂಧಿಗಾರ ಸಾವಿಗೀಡಾದವರು.
ಇವರು 8 ವರ್ಷಗಳ ಹಿಂದೆ ಜಮ್ಮುವಿನಲ್ಲಿ ಮರಾಠಾ ಪದಾತಿ ದಳದ ಮೂಲಕ ಸೇನೆಗೆ ಸೇರಿದ್ದರು. ಮುಂದಿನ ವಾರ ನಿಗದಿಯಾಗಿದ್ದ ತಮ್ಮ ವಿವಾಹಕ್ಕೆ ರಜೆ ಪಡೆದು ರೈಲಿನಲ್ಲಿ ಬರುತ್ತಿರುವಾಗ ಪಂಜಾಬಿನ ಲುಧಿಯಾನಾದಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಇಂದು (ಜೂ.10) ಸ್ವಗ್ರಾಮ ಕನಸಗೇರಿಗೆ ಯೋಧ ಕಾಶಿನಾಥ ಅವರ ಮೃತದೇಹ ತಲುಪಿದ್ದು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.