ಬೆಳಗಾವಿ : ಕಳೆದ ವರ್ಷದ ಅಂತ್ಯಕ್ಕೆ ಮಹಾರಾಷ್ಟ್ರದ ಕನ್ನಡ ಭಾಷಿಕ ಪ್ರದೇಶಗಳು ಭಾಷಾ ಹಿನ್ನಲೆಯಲ್ಲಿ ತಮಗಾಗುತ್ತಿದ್ದ ತಾರತಮ್ಯ, ಅನ್ಯಾಯ ಪ್ರತಿಭಟಿಸಿ ತಮ್ಮ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಲು ಮಹಾರಾಷ್ಟ್ರ ಸರಕಾರಕ್ಕೆ ಆಗ್ರಹಿಸಿದ್ದವು. ಕರ್ನಾಟಕ ಸರಕಾರಕ್ಕೂ ಈ ಕುರಿತು ವಿನಂತಿಸಿದ್ದವು. ರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯ ಚರ್ಚೆಯಾಗಿದ್ದರಿಂದ ಮುಜುಗರಕ್ಕೀಡಾದ ಮಹಾರಾಷ್ಟ್ರ ಶಿವಸೇನೆ (ಬಾಳ ಠಾಕ್ರೆ ಬಣ) ಮತ್ತು ಬಿಜೆಪಿ ಸರಕಾರ ತನ್ನ ಸಚಿವರೊಬ್ಬರನ್ನು ಕಳುಹಿಸಿ ಕನ್ನಡಿಗರ ಮನವೊಲಿಸಿ ಕನ್ನಡಿಗರು ಹೆಚ್ಚಾಗಿರುವ ಪ್ರದೇಶಗಳ ಅಭಿವೃದ್ಧಿಗೆ 199 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ಈ ವರೆಗೂ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ.
ಈಗ ಮಹಾರಾಷ್ಟ್ರದ ಕನ್ನಡಿಗರಲ್ಲ ಖುದ್ದು ಮರಾಠಿಗರೂ ಮಹಾರಾಷ್ಟ್ರ ಸರಕಾರದ ನೀತಿ ವಿರೋಧಿಸಿ ಕರ್ನಾಟಕಕ್ಕೆ ತಮ್ಮ ಪ್ರದೇಶ ಸೇರಿಸಬೇಕೆಂದು ಒತ್ತಾಯಿಸಿ ಮಹಾರಾಷ್ಟ್ರಕ್ಕೆ ಮತ್ತೊಂದು ಮಾರಕ ಏಟು ನೀಡಿದ್ದಾರೆ.
ನೆರೆಯ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕು ಕರ್ನಾಟಕ ಗಡಿಗೆ ಹೊಂದಿಕೊಂಡ ಮಹಾರಾಷ್ಟ್ರದ ಕಡೆಯ ತಾಲ್ಲೂಕು. ಕರ್ನಾಟಕದ ನಿಪ್ಪಾಣಿ ಪಟ್ಟಣಕ್ಕೆ ಹತ್ತಿಕೊಂಡಿರುವ ಈ ತಾಲ್ಲೂಕು ಕೊಲ್ಹಾಪುರಗಿಂತ ನಿಪ್ಪಾಣಿಯ ಜೊತೆ ಹೆಚ್ಚು ಶಿಕ್ಷಣ, ವ್ಯಾಪಾರ ವ್ಯವಹಾರ ಹೊಂದಿದೆ. ಈ ತಾಲ್ಲೂಕಿನ ಸುಲಕೋಡ, ಕಸಬಾ, ಸಾಗಾಂವ, ಮೌಜೆ ಸಾಗಾಂವ, ರಣಧೀಪೆವಾಡಿ ಸೇರಿದಂತೆ ಸುಮಾರು 10 ಗ್ರಾಮ ಪಂಚಾಯತಗಳ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಮತ್ತು ಗ್ರಾಮಸ್ಥರು ಕಾಗಲ್ ಪಟ್ಟಣದಲ್ಲಿ ಸಭೆ ಸೇರಿ ನೀರಾವರಿ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಸರಕಾರ ತಮ್ಮ ಆಗ್ರಹಕ್ಕೆ ವಿರುದ್ಧ ನಿರ್ಧಾರ ತೆಗೆದುಕೊಂಡಿರುವುದರಿಂದ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಗಳು ತಮ್ಮ ಮುಂದಿನ ಸದಸ್ಯರ ಸಭೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸುವ ಠರಾವ ಪಾಸ್ ಮಾಡಬೇಕೆಂದು ಸಭೆಯಲ್ಲಿ ನಿರ್ಧಾರ ಮಾಡಿರುವ ಕುರಿತು ಸಾರಲಾಯಿತು.
ಮಹಾರಾಷ್ಟ್ರ ಸರಕಾರ ಸುಮಾರು 5-ಲಕ್ಷ ಜನಸಂಖ್ಯೆಯ ಇಚಲಕರಂಜಿ ನಗರಕ್ಕೆ ಕಾಗಲ್ ತಾಲೂಕಿನಲ್ಲಿ ಹರಿದು ಹೋಗಿರುವ ದೂದಗಂಗಾ ನದಿಯಿಂದ ನೀರು ಪೂರೈಸಲು ನಿರ್ಧರಿಸಿರುವುದನ್ನು ವಿರೋಧಿಸಿ ಕಾಗಲ್ ತಾಲ್ಲೂಕಿನ ನಾಗರಿಕರು “ದೂದಗಂಗಾ ಬಚಾವ್ ಕೃತಿ ಸಮಿತಿ” ಎಂಬ ಸಂಘಟನೆಯನ್ನು ಸ್ಥಾಪಿಸಿಕೊಂಡಿದ್ದು ಅದರಡಿ ಪ್ರತಿಭಟನೆ ಮಾಡುತ್ತಿದ್ದಾರೆ.
ಪಂಚಾಗಂಗಾ ನದಿ ಇಚಲಕರಂಜಿ ಪಟ್ಟಣಕ್ಕೆ ಹತ್ತಿರದಲ್ಲಿ ಹರಿಯುತ್ತಿದೆ. ಇದರಿಂದ ಆ ಪಟ್ಟಣಕ್ಕೆ ನೀರು ಪೂರೈಸದೇ ಸುಮಾರು 75 ಕಿಮಿ ದೂರದಲ್ಲಿರುವ ದೂದಗಂಗಾ ನದಿಯಿಂದ ನೀರು ಪೂರೈಸುವ ಔಚಿತ್ಯವೇನು ಎಂದು ಕಾಗಲ್ ತಾಲೂಕಿನ ನಾಗರಿಕರು ಪ್ರಶ್ನಿಸಿದ್ದಾರೆ. ಒಂದು ವೇಳೆ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಕಾಗಲ್ ತಾಲೂಕಿನ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಲಿ ಎಂದಿದ್ದಾರೆ.
“ನಮ್ಮ ಕಾಗಲ್ ತಾಲ್ಲೂಕು ಮಳೆಗಾಲದಲ್ಲೂ ನೀರಿಗೆ ತೊಂದರೆ ಪಡುತ್ತಿದೆ, ಇಂತಹ ಸ್ಥಿತಿಯಲ್ಲಿ ದೂದಗಂಗಾ ನದಿಯಿಂದ ಇಂಚಲಕರಂಜಿಗೆ ನೀರು ಕೊಟ್ಟರೆ, ಕೃಷಿಗಿರಲಿ, ಜನ ಜಾನುವಾರುಗಳಿಗೂ ಕುಡಿಯಲು ನೀರು ಸಿಗುವುದಿಲ್ಲ. ಪಂಚಾಗಂಗಾ ನದಿ ಇಚಲಕರಂಜಿ ನಗರಕ್ಕೆ ಹತ್ತಿರವಿರುವುದರಿಂದ ಅದರಿಂದ ಯಾಕೆ ನೀರು ಪೂರೈಸಬಾರದು” ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಕಾಗಲ್ ನಾಗರಿಕರು ಅಭಿಪ್ರಾಯ ಪಟ್ಟಿದ್ದಾರೆ.
ದೂದಗಂಗಾ ನದಿಯಿಂದ ಇಚಲಕರಂಜಿಗೆ ನೀರು ಪೂರೈಸಲು ನಮ್ಮ ವಿರೋಧವಿದೆ. ನಮಗೆ ಮೀಸಲಾದ ನೀರನ್ನು ಬೇರೆಯವರಿಗೆ ಕೊಟ್ಟರೆ ಪ್ರತಿಭಟನೆ ಮಾತ್ರವಲ್ಲ, ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಗಳೂ ಕರ್ನಾಟಕಕ್ಕೆ ಸೇರುವ ಬಗ್ಗೆ ಠರಾವು ಪಾಸ್ ಮಾಡುತ್ತೇವೆ. ಈಗಾಗಲೇ 10 ಗ್ರಾಮ ಪಂಚಾಯತಗಳು ಸಿದ್ದವಾಗಿವೆ ಎಂದು ಸಭೆಯಲ್ಲಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಹೇಳಿದರು.
ಇದಕ್ಕೂ ಮೊದಲು ಇಚಲಕರಂಜಿಗೆ ವಾರಣಾ ಜಲಾಶಯದಿಂದ ನೀರು ಪೂರೈಸಲು ನಿರ್ಧಾರಿಸಲಾಗಿತ್ತು. ಆದರೆ ಇದರ ವಿರುದ್ಧ ಆಗ ನಡೆದ ತೀವ್ರ ಪ್ರತಿಭಟನೆಯಿಂದ ಯೋಜನೆ ಹಿಂದಕ್ಕೆ ಪಡೆಯಲಾಯಿತು. ಈಗ ದೂದಗಂಗಾ ನದಿಯಿಂದ ನೀರು ಪೂರೈಸುವ ಯೋಜನೆಗೂ ಅದೇ ಮಾದರಿಯ ಹೋರಾಟ ಅಗತ್ಯವಿದೆ. “ಕರ್ನಾಟಕಕ್ಕೆ ನಮ್ಮನ್ನು ಸೇರಿಸಿ ಎಂದು ರೆಸೊಲ್ಯೂಷನ್ ಪಾಸ್ ಮಾಡುವ ನಿರ್ಧಾರವೂ ಈ ಹೋರಾಟದ ಒಂದು ಭಾಗ. ನಾವು ಕರ್ನಾಟಕದಲ್ಲಿದ್ದರೆ ಜನ ಹೆಚ್ಚು ನೆಮ್ಮದಿಯಿಂದಿರಲು ಸಾಧ್ಯ” ಎಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು ಎಂದು ತಿಳಿದು ಬಂದಿದೆ.
ಕಳೆದ ವರುಷದ ಅಂತ್ಯದಲ್ಲಿ ಮಹಾರಾಷ್ಟ್ರದಲ್ಲಿನ ಕನ್ನಡ ಭಾಷಿಕ ಪ್ರದೇಶಗಳಾದ ಸಾಂಗ್ಲಿ ಜಿಲ್ಲೆಯ ಜತ್, ಸೋಲ್ಹಾಪುರ ಜಿಲ್ಲೆಯ ಅಕ್ಕಲಕೋಟ ಮತ್ತು ಲಾತೂರ್ ಜಿಲ್ಲೆಯ ದಿಯೋನಿ ತಾಲೂಕುಗಳ ಸುಮಾರು 50 ಕ್ಕೂ ಹೆಚ್ಚು ಗ್ರಾಮ ಪಂಚಾಯತಗಳು ಮಹಾರಾಷ್ಟ್ರ ಸರಕಾರದ ತಾರತಮ್ಯ ವಿರೋಧಿಸಿ ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಠರಾವು ಪಾಸ್ ಮಾಡಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಕಾರಿಗಳಿಗೆ ಪ್ರತಿಗಳನ್ನು ನೀಡಿದ್ದವು. ಇದರಿಂದ ಮುಜುಗರ, ಕೋಪಕ್ಕೊಳಗಾದ ಮಹಾರಾಷ್ಟ್ರ ಸರಕಾರವು ಗ್ರಾಮ ಪಂಚಾಯತಗಳಿಗೆ ಪೊಲೀಸ್ ಮೂಲಕ ನೋಟೀಸ್ ಕೂಡ ನೀಡಿತ್ತು. ಮುಂದಿನ ಸಭೆ ಜರುಗುವ ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕೆಂದೂ ಆದೇಶಿಸಿತ್ತು.
ಜತ್ ತಾಲ್ಲೂಕು ಕನ್ನಡ ಹೋರಾಟ ಸಮಿತಿಯ ಅಧ್ಯಕ್ಷ ಸೋಮಲಿಂಗ ಚೌಧರಿ ಅವರು ಕಳೆದ ಡಿಸೆಂಬರನಲ್ಲಿ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮಹಾರಾಷ್ಟ್ರ ಸರಕಾರ ಅಲ್ಲಿನ ಕನ್ನಡಿಗರನ್ನು ಎಷ್ಟೊಂದು ನಿರ್ಲಕ್ಷಿಸಿದೆ ಎಂದು ವಿವರಿಸಿದ್ದರು. “ಮಹಾರಾಷ್ಟ್ರದಲ್ಲಿ ಕನ್ನಡಿಗರು ವಾಸವಾಗಿರುವ ಪ್ರದೇಶಗಳಲ್ಲಿ ಸರಿಯಾದ ರಸ್ತೆ, ಸಾರ್ವಜನಿಕ ವಿದ್ಯುತ್ ದೀಪ, ಕುಡಿಯುವ ನೀರು, ಬಸ್ ವ್ಯವಸ್ಥೆಗಳಿಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ದೇಶ ಹೇಗಿತ್ತು ಎಂಬುವುದನ್ನು ನೋಡಬೇಕಿದ್ದರೆ ನಮ್ಮ ಪ್ರದೇಶಕ್ಕೆ ಬರಬೇಕು” ಎಂದು ತಿಳಿಸಿದ್ದ ಅವರು, “ಮಹಾರಾಷ್ಟ್ರದಲ್ಲಿ 215 ಕನ್ನಡ ಪ್ರಾಥಮಿಕ ಶಾಲೆಗಳಿವೆ. ಆದರೆ ಶಿಕ್ಷಕರ ಸಂಖ್ಯೆ ತುಂಬಾ ಕಡಿಮೆಯಿದೆ. 200 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರಿದ್ದಾರೆ. ನಿವೃತ್ತರಾದ, ವರ್ಗಾವಣೆಗೊಂಡ ಶಿಕ್ಷಕರ ಸ್ಥಾನಕ್ಕೆ ಹಲವು ವರುಷಗಳಾದರೂ ಭರ್ತಿ ಮಾಡುತ್ತಿಲ್ಲ. ಶೈಕ್ಷಣಿಕ ವರುಷ ಮುಗಿಯಲು ಬಂದರೂ ಕನ್ನಡ ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಸುವದಿಲ್ಲ. ಇಂತಹ ಸ್ಥಿತಿಯಲಿರುವುದಕ್ಕಿಂತ ನಮ್ಮ ತಾಯಿ ನಾಡಲ್ಲಿರುವುದೇ ಸೂಕ್ತವೆಂದು ನಿರ್ಧರಿಸಿ ಗ್ರಾಮ ಪಂಚಾಯತಗಳು ಕರ್ನಾಟಕಕ್ಕೆ ಸೇರುವ ಠರಾವು ಪಾಸ್ ಮಾಡುತ್ತಿವೆ” ಎಂದಿದ್ದರು.