ಭ್ರಷ್ಟಾಚಾರ ವಿಚಾರ ಮರೆಮಾಚಲು ವಿವಾದಿತ ಸಾವರ್ಕರ ಭಾವಚಿತ್ರ ಅಳವಡಿಕೆ; ಕಾಂಗ್ರೆಸ್‌ ಪ್ರತಿಭಟನೆ

A B Dharwadkar
ಭ್ರಷ್ಟಾಚಾರ ವಿಚಾರ ಮರೆಮಾಚಲು ವಿವಾದಿತ ಸಾವರ್ಕರ ಭಾವಚಿತ್ರ ಅಳವಡಿಕೆ; ಕಾಂಗ್ರೆಸ್‌ ಪ್ರತಿಭಟನೆ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಬೆಳಗಾವಿ, 19- ಕರ್ನಾಟಕದ ಪುಣ್ಯಪುರುಷರನ್ನು ಬಿಟ್ಟು ಬೆಳಗಾವಿಯಲ್ಲಿ ವಿವಾದಿತ ಸಾವರ್ಕರ ಫೋಟೋ ಅಳವಡಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು.

ಈ ನಾಡಿನ ಮಹನೀಯರ ಭಾವಚಿತ್ರಗಳನ್ನು ವಿಧಾನಸಭೆಯಲ್ಲಿ ಅಳವಡಿಸಬೇಕು ಎಂದು ಕಾಂಗ್ರೆಸ್ ನಾಯಕರು ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ಸೋಮವಾರ ಮಹನೀಯರ ಭಿತ್ತಿಚಿತ್ರ ಹಿಡಿದು ಪ್ರದರ್ಶನ ನಡೆಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಪತ್ರಕರ್ತರೆದುರು ಮಾತನಾಡಿ, ನಾವೆಲ್ಲರೂ ಹುಟ್ಟುತ್ತಲೇ ಹಿಂದೂಗಳು, ಸಾಯುವಾಗಲೂ ಹಿಂದೂಗಳೇ. ಮೊದಲಿನಿಂದಲೂ ಹಿಂದೂ ಆಚರಣೆಗಳನ್ನೇ ಪಾಲಿಸುತ್ತಾ ಬಂದಿದ್ದೇವೆ. ನಮ್ಮಲ್ಲಿ ಹಿಂದೂ ಭಾವ, ಭಕ್ತಿ, ಆಚಾರ, ವಿಚಾರ, ಅಡಗಿದೆ. ಆದರೆ ಬಿಜೆಪಿಯವರು ನಾಟಕದ ಹಿಂದುತ್ವ ಎಂದರು.

ಈಗ ನಾವು ಸರ್ಕಾರಕ್ಕೆ ಆಗ್ರಹಿಸುತ್ತಿರುವುದೇನೆಂದರೆ, ಈ ಸುವರ್ಣಸೌಧದಲ್ಲಿ ದೇಶದ ಮೊದಲ ಪ್ರಧಾನಿ, ಆಧುನಿಕ ಭಾರತದ ನಿರ್ಮಾತೃ ಪಂಡಿತ ಜವಹಾರಲಾಲ ನೆಹರೂ, ಶಿಶುನಾಳ ಷರೀಫರು, ವಿಶ್ವಗುರು ಬಸವಣ್ಣ, ನಾರಾಯಣಗುರು, ಕನಕದಾಸರು, ಅಂಬೇಡ್ಕರ, ಬಾಬು ಜಗಜೀವನ ರಾಮ, ಸರ್ದಾರ ವಲ್ಲಭಭಾಯಿ ಪಟೇಲ, ಕುವೆಂಪು ಹಾಗೂ ಈ ಭಾಗದ ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳನ್ನು ಹಾಕಬೇಕು ಎಂದರು.

ನನಗೆ ಸಭಾಪತಿ ಅವರ ಕಚೇರಿಯಿಂದ ದೂರವಾಣಿ ಕರೆ ಮಾಡಿ ಇಂದು ಬೆಳಿಗ್ಗೆ 10 ಗಂಟೆಗೆ, ಮಹಾತ್ಮ ಗಾಂಧಿ, ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮವಿದೆ, ನೀವು ಆಗಮಿಸಬೇಕು ಎಂದು ಆಹ್ವಾನಿಸಿದ್ದರು. ನಾವು ಬಹಳ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದೆವು. ಆದರೆ ಇಲ್ಲಿ ಬಂದ ನಂತರ ಮಾಧ್ಯಮಗಳ ಮೂಲಕ ಸಾರ್ವಕರ ಫೋಟೋ ಕೂಡ ಹಾಕಲಾಗುತ್ತಿದೆ ಎಂದು ತಿಳಿಯಿತು. ಸಾರ್ವಕರ ಅವರಿಗೂ ನಮ್ಮ ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ವಿವಾದಾತ್ಮಕ ವಿಚಾರವಾಗಿದ್ದು, ಈ ಬಗ್ಗೆ ನಾವು ಬೇರೆ ಚರ್ಚೆ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಇಲ್ಲಿ ಜ್ವಲಂತ ಸಮಸ್ಯೆಗಳಿವೆ. ಅನೇಕ ಪ್ರತಿಭಟನೆಗಳು ನಡೆದಿವೆ. ಭ್ರಷ್ಟಾಚಾರ, ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಇವೆಲ್ಲವೂ ಚರ್ಚೆ ಆಗಲಿದೆ ಎಂಬ ಕಾರಣಕ್ಕೆ ಜನರ ದಿಕ್ಕು ತಪ್ಪಿಸಲು ಸರ್ಕಾರ ಈ ಪ್ರಯತ್ನಕ್ಕೆ ಮುಂದಾಗಿದೆ ಎಂದರು.

ಬಿಜೆಪಿಯವರು ಅಜೆಂಡಾ ರಚಿಸಿದ್ದಾರೆಯೇ ಎಂಬ ಪ್ರಶ್ನೆಗೆ, ‘ನಾರಾಯಣಗುರು, ಕುವೆಂಪು, ಬಸವಣ್ಣ, ಕನಕದಾಸರು, ವಾಲ್ಮೀಕಿ ಸೇರಿದಂತೆ ನಮಗೆ ಎಲ್ಲರೂ ಬೇಕು. ಸಾಮಾಜಿಕ ನ್ಯಾಯ ಸಿಗಬೇಕು. ದೇಶ, ರಾಜ್ಯದ ಹಿತಕ್ಕೆ ಶ್ರಮಿಸಿ ಅಮರರಾದ ಎಲ್ಲಾ ಧರ್ಮದ ನಾಯಕರು ಬೇಕು ಎಂಬುದು ನಮ್ಮ ಅಜೆಂಡಾ’ ಎಂದು ಉತ್ತರಿಸಿದರು.

ಭ್ರಷ್ಟಾಚಾರ, ಮತದಾರರ ಮಾಹಿತಿ ಕಳುವು, 40% ಕಮಿಷನ್, ಈ ಭಾಗದ ಜನರಿಗೆ ಆಗುತ್ತಿರುವ ಅನ್ಯಾಯ ಮತ್ತು ದುರಾಡಳಿತದ ಬಗ್ಗೆ ಚರ್ಚೆ ಆಗಬಾರದು ಎಂಬ ಕಾರಣಕ್ಕೆ ಈ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಸುಳ್ಳಿನ ರಾಜ. ಸಾವರ್ಕರ ಫೋಟೋ ಹಾಕಿರುವುದು ನನಗೆ ಗೊತ್ತೇ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ನೀವು ನಿಮಗೆ ಬೇಕಾದ ಸಮರ್ಥನೆ ಮಾಡಿಕೊಳ್ಳಿ. ಆದರೆ ನನಗೆ ಗೊತ್ತೇ ಇಲ್ಲ ಎಂದು ಸುಳ್ಳು ಹೇಳಿ ಮುಖ್ಯಮಂತ್ರಿ ಸ್ಥಾನಕ್ಕೆ ಧಕ್ಕೆ ತರಬಾರದು ಎಂದು ಅವರು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ಶಾಸಕರು ಸುವರ್ಣಸೌಧದ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಜವಾಹರ್ ಲಾಲ್ ನೆಹರೂ, ಕುವೆಂಪು, ವಾಲ್ಮೀಕಿ, ಕನಕದಾಸರು, ದೇವರಾಜ ಅರಸು ಸೇರಿದಂತೆ ಹಲವು ನಾಯಕರ ಚಿತ್ರಗಳನ್ನು ಕೈಯಲ್ಲಿ ಹಿಡಿದು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕದ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ ಅವರ ಭಾವಚಿತ್ರ ಅಳವಡಿಸುವುದನ್ನು ಬಿಟ್ಟು ಸಾವರ್ಕರ ಭಾವಚಿತ್ರ ಅಳವಡಿಸುವ ಅವಶ್ಯಕತೆ ಏನಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಪ್ರಶ್ನಿಸಿದ್ದಾರೆ.

ಸರ್ಕಾರವು ವಿಧಾನಸಭೆ ಹಾಲ್‌ನಲ್ಲಿ ಮಹಾನ್ ವ್ಯಕ್ತಿಗಳ ಆರು ಚಿತ್ರಗಳನ್ನು ಅನಾವರಣ ಮಾಡಿದೆ. ಅವುಗಳಲ್ಲಿ ವಿವಾದಿತ ಸಾವರ್ಕರದ್ದು ಸಹ ಒಂದು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.