ಗದಗ: ಮೊಹಮದ್ ಪೈಗಂಬರ್ ಅವರ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದ ಜಿಲ್ಲೆಯ ನಾಗಾವಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ಮುನಾಫ ಬಿಜಾಪೂರ ಅವರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಅಪರ ಆಯುಕ್ತ ಶ್ರೀಶೈಲ ಬಿರಾದಾರ ಆದೇಶ ಹೊರಡಿಸಿದ್ದಾರೆ.
ಗದಗ ತಾಲ್ಲೂಕಿನ ನಾಗಾವಿ ಶಾಲೆಯಲ್ಲಿ ಇಸ್ಲಾಮೀಕರಣ ಪ್ರಯತ್ನ ನಡೆಯುತ್ತಿದೆ ಎಂದು ಸೆಪ್ಟೆಂಬರ್ 27ರಂದು ಶ್ರೀರಾಮಸೇನೆ ಕಾರ್ಯಕರ್ತರು ಶಾಲೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಶಾಂತಿ ಪ್ರಕಾಶನ ಪ್ರಕಟಿಸಿರುವ ಮೊಹಮದ್ ಪೈಗಂಬರ್ ಅವರ ಜೀವನ ಮತ್ತು ಬೋಧನೆ ಕುರಿತ ಪುಸ್ತಕವನ್ನು ಮಕ್ಕಳಿಗೆ ಕೊಟ್ಟಿದ್ದ ಮುಖ್ಯ ಶಿಕ್ಷಕರು ಪ್ರಬಂಧ ಬರೆಯಲು ಸೂಚಿಸಿದ್ದರು.
ಪೈಗಂಬರ್ ಅವರ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದು ಶ್ರೀರಾಮಸೇನೆ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿತ್ತು. ಪಠ್ಯದಲ್ಲಿ ಇಲ್ಲದ ವಿಷಯದ ಬಗ್ಗೆ ಪ್ರಬಂಧ ಬರೆಯಲು ಸೂಚಿಸಿದ್ದು ಏಕೆ ಎಂದು ಕಾರ್ಯಕರ್ತರು ಪ್ರಶ್ನಿಸಿದ್ದರು.