22 ತಾಸಾದರೂ ರೈಲು ಪ್ರಯಾಣಿಕರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ!

A B Dharwadkar
22 ತಾಸಾದರೂ ರೈಲು ಪ್ರಯಾಣಿಕರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ!

ಬೆಳಗಾವಿ, ೧೨- ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ವಾಸ್ಕೋ – ನಿಜಾಮುದ್ದೀನ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶದ ಎಂಟು ಪ್ರಯಾಣಿಕರಲ್ಲಿ ಇನ್ನೂ ಆರು ಜನ ಬೇಷುದ್ದಾವಸ್ಥೆಯಿಂದ ಹೊರಗೆ ಬಂದಿಲ್ಲ. ಅವರಿಗೆ ಸೋಮವಾರ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಉಪಚಾರಕ್ಕೆ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.

ಸೋಮವಾರ ಸಂಜೆ 3 ಗಂಟೆಗೆ ರೈಲಿನಲ್ಲಿ ಅಪರಿಚಿತ ಪ್ರಯಾಣಿಕರು ನೀಡಿದ ಒಣ ತಿಂಡಿ ಸೇವಿಸಿದ ನಂತರ ಪ್ರಜ್ಞೆ ಕಳೆದುಕೊಂಡ ಎಂಟು ಜನರಲ್ಲಿ ಇಬ್ಬರು ಮಂಗಳವಾರ ಮುಂಜಾನೆ ಪ್ರಜ್ಞೆ ಪಡೆದಿದ್ದು ಇತರ ಆರು ಜನ ಸ್ವಲ್ಪ ಚೇತರಿಸಿಕೊಂಡಿದ್ದಾರಾದರೂ ಇನ್ನೂ ಪೂರ್ಣ ಪ್ರಜ್ಞೆ ಪಡೆದಿಲ್ಲ. ಗೋವಾದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇವರೆಲ್ಲರೂ 25 ವಯಸ್ಸಿನೊಳಗಿನವರು. ರಜೆ ಪಡೆದು ದೆಹಲಿ ಬಳಿಯಿರುವ ಮಧ್ಯ ಪ್ರದೇಶದ ಗಡಿಯಲ್ಲಿರುವ ಖಂಡ್ವಾ ಊರಿಗೆ ಹೊರಟಿದ್ದರು. ಆಗ ರೈಲು ಬೋಗಿಯಲ್ಲಿ ಪ್ರಯಾಣಿಕರ ಸೋಗಿನಲ್ಲಿದ್ದ ಅಪರಿಚಿತರು ನೀಡಿದ್ದ ಚಾಕಲೇಟ್, ಚಿಪ್ಸ ಮುಂತಾದ ತಿಂಡಿಯಿರುವ ಪಾಕೆಟ್ ಪಡೆದು ತಿಂದ ತಕ್ಷಣ ಪ್ರಜ್ಞೆ ಕಳೆದುಕೊಂಡಿದ್ದಾರೆ. ಅವರಲ್ಲಿದ್ದ ಹಣ ಮುಂತಾದವುಗಳನ್ನು ದೋಚಿಕೊಳ್ಳುವ ಉದ್ದೇಶದಿಂದ ಅಪರಿಚಿತರು ಇದನ್ನು ಮಾಡಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬೆಳಗಾವಿ ರೈಲ್ವೆ ಪೊಲೀಸ್ ಇನ್ಸಪೆಕ್ಟರ್ ವೆಂಕಟೇಶ ಅವರು ಸಮದರ್ಶಿಗೆ ಮಾಹಿತಿ ನೀಡಿದ್ದಾರೆ. ಸೋಮವಾರ ಅತೀವ ಬೇಷುದ್ದಾವಸ್ಥೆಯಲ್ಲಿದ್ದ ಎಂಟೂ ಜನರಲ್ಲಿ ಇಬ್ಬರು ಚೇತರಿಸಿಕೊಂಡಿದ್ದಾರೆ. ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇರುವ ಕಾರಣ ವಿಚಾರಣೆ ಮಾಡಲು ಆಸ್ಪತ್ರೆ ಅವಕಾಶ ನೀಡಿಲ್ಲ. ಉಳಿದ ಆರು ಜನ ಇನ್ನೂ ಬೇಷುದ್ದಾವಸ್ಥೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.

ಗೋವಾದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಈ ಎಂಟೂ ಜನ ರಜೆಯ ಮೇಲೆ ಮಧ್ಯ ಪ್ರದೇಶದಲ್ಲಿರುವ ಖಂಡ್ವಾಗೆ ಪ್ರಯಾಣಿಸಲು ವಾಸ್ಕೋ- ನಿಜಾಮುದ್ದೀನ ರೈಲಿನಲ್ಲಿ ವಾಸ್ಕೋದಿಂದ ಮಧ್ಯಾಹ್ನ 3 ಗಂಟೆಗೆ ಪ್ರಯಾಣ ಆರಂಭಿಸಿದ್ದರು. ಸಾಮಾನ್ಯ ಬೋಗಿಯ ಟಿಕೆಟ್ ಕೊಂಡಿದ್ದ ಇವರ ಬೋಗಿಯು ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಆಗ ಇವರಿಗೆ ಅಪರಿಚಿತ ಪ್ರಯಾಣಿಕರು ಚಾಕಲೇಟ್ ಮತ್ತು ಪ್ಯಾಕ್ ಮಾಡಿದ್ದ ಕುರುಕಲು ತಿಂಡಿ ನೀಡಿದ್ದಾರೆ. ಅದನ್ನು ಸೇವಿಸಿದ ನಂತರ ಒಂದೆರಡು ಬಾರಿ ಶೌಚಾಲಯಕ್ಕೆ ಹೋಗಿ ಬಂದ ಇವರು ಮಲಗಿಕೊಂಡವರು ಬಹಳೊತ್ತಾದರೂ ಏಳಲೇ ಇಲ್ಲ. ಇದರಿಂದ ಸಂಶಯಗೊಂಡ ಸಹ ಪ್ರಯಾಣಿಕರು ಅವರನ್ನು ಎಚ್ಚರಿಸಲು ಎಷ್ಟೇ ಪ್ರಯತ್ನಿಸಿದರೂ ಅವರು ಏಳಲಿಲ್ಲ.

ರೈಲು ರಾತ್ರಿ ಸುಮಾರು 8.30 ಕ್ಕೆ ಬೆಳಗಾವಿ ನಿಲ್ದಾಣಕ್ಕೆ ತಲುಪಿದಾಗ ಪ್ರಯಾಣಿಕರು ರೈಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಎಲ್ಲರನ್ನು ಆಂಬುಲೆನ್ಸ ಮೂಲಕ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ನಂತರ ಕೆಎಲ್ಈ ಆಸ್ಪತ್ರೆಗೆ ಸೇರಿಸಲಾಯಿತು.

ಇಂದು ಮಂಗಳವಾರ ಮುಂಜಾನೆ ಇಬ್ಬರಿಗೆ ಮಾತ್ರ ಪ್ರಜ್ಞೆ ಮರಳಿದೆ. ಉಳಿದ ಆರು ಜನ ಇನ್ನೂ ಅಪ್ರಜ್ಞಾವಸ್ತೆಯಲ್ಲಿದ್ದಾರೆ. ಅವರಿಗೆ ಪೂರ್ಣ ಪ್ರಜ್ಞೆ ಬಂದು, ಆಸ್ಪತ್ರೆ ಅನುಮತಿ ಪಡೆದು ವಿಚಾರಣೆ ನಡೆಸಲಾಗುವುದು. ಅಲ್ಲಿಯವರೆಗೂ ಅವರಿಗೆ ತೊಂದರೆ ಕೊಡಲಾಗದು ಎಂದು ಎಂದು ಇನ್ಸಪೆಕ್ಟರ್ ವೆಂಕಟೇಶ ತಿಳಿಸಿದರು.

ಬೆಳಗಾವಿ ರೈಲ್ವೆ ಪೊಲೀಸರು ವಾಸ್ಕೋ ರೈಲ್ವೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಅವರು ರೈಲು ನಿಲ್ದಾಣದಲ್ಲಿರುವ ಸಿಸಿಟಿವಿ ದೃಶ್ಯ ವೀಕ್ಷಿಸುತ್ತಿದ್ದಾರೆ. ಆರೋಪಿಗಳು ಈ ಎಂಟೂ ಜನರನ್ನು ಹಿಂಬಾಲಿಸಿ ಬಂದು ಪ್ರಯಾಣಿಕರಂತೆ ರೈಲು ಹತ್ತಿ ಅವರನ್ನು ಲೂಟಿ ಮಾಡುವ ಉದ್ದೇಶ ಹೊಂದಿರಬಹುದು. ಆದರೆ ಬೋಗಿಯು ಪ್ರಯಾಣಿಕರಿಂದ ತುಂಬಿದ್ದರಿಂದ ಅವರಿಗೆ ಅದು ಸಾಧ್ಯವಾಗಿಲ್ಲ. ಅವರೆಲ್ಲರ ಹಣ ಮತ್ತು ಇತರೆ ವಸ್ತುಗಳು ಸುರಕ್ಷಿತವಾಗಿವೆ ಎಂದು ವೆಂಕಟೇಶ ತಿಳಿಸಿದರು.

“ಕಲುಷಿತ ಆಹಾರ ಸೇವಿಸಿದ್ದರೆ ಜನ ತೀವ್ರ ವಾಂತಿ, ಭೇದಿಯಿಂದ ಬಳಲುತ್ತಾರೆಯೇ ಹೊರತು ಪ್ರಜ್ಞೆ ತಪ್ಪುವುದಿಲ್ಲ. ವಿಷಮಿಶ್ರಿತ ಪದಾರ್ಥ ಸೇವನೆಯೇ ಇಷ್ಟು ದೀರ್ಘಕಾಲದ ಮೂರ್ಛಾವಸ್ಥೆಗೆ ಕಾರಣ” ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ ಅವರು ಸಮದರ್ಶಿಗೆ ಮಾಹಿತಿ ನೀಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.