ಬೈಲಹೊಂಗಲ: ಬಾಲಕಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ನಾಲ್ವರಿಗೆ ಚಾಕು ಇರಿದಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ನಡೆದಿದೆ.
ತಮ್ಮ ಮಗಳಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಲು ಹುಡಗಿಯ ತಂದೆ ಹಿರಿಯರ ಸಮೇತ ಹೋಗಿದ್ದರು. 17 ವರ್ಷದ ಬಾಲಕ ಹಾಗೂ ಆತನ ಸ್ನೇಹಿತರಿಗೆ ಬುದ್ದಿ ಹೇಳಲು ಹೋದಾಗ ಜಗಳ ನಡೆದು ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಬಾಲಕಿಯ ತಂದೆ ಜೊತೆಗೆ ನಾಲ್ವರ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿಯಲಾಗಿದೆ.
ಅಲ್ಲದೇ ಆರೋಪಿ ಕಡೆಯ ಓರ್ವ ವ್ಯಕ್ತಿಗೂ ಗಾಯವಾಗಿದೆ. ರಫೀಕ ಕುರಿಕೊಪ್ಪ, ಸಾಹಿದ ಸೌದಾಗರ, ಅತಾಹುಲ್ಲಾ ಹುಬ್ಬಳ್ಳಿ, ಮೆಹಬೂಬ ಹುಬ್ಬಳ್ಳಿ ಎಂಬುವರು ಚಾಕು ಇರಿತಕ್ಕೆ ಗಾಯಗೊಂಡಿದ್ದಾರೆ. ಜಗಳ ಬಿಡಿಸಲು ಹೋದ ರವಿ ತಿಮ್ಮನ್ನವರ ಎಂಬುವರ ಮೇಲೆಯೂ ಹಲ್ಲೆ ನಡೆಸಲಾಗಿದೆ.
ಗಾಯಾಳುಗಳಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಬಿಮ್ಸ್ ಆಸ್ಪತ್ರೆ ಬಳಿ 20ಕ್ಕೂ ಹೆಚ್ಚು ಜನ ಪೊಲೀಸರಿಂದ ಬಂದೋಬಸ್ತ ಒದಗಿಸಲಾಗಿದೆ.