ಪಾಟ್ನಾ: ದುರ್ಗಾ ದೇವಿಯ ಪೂಜೆಗೆಂದು ಇಟ್ಟಿದ್ದ ಸೇಬು ಹಣ್ಣನ್ನು ತಿಂದಿದಕ್ಕೆ ಆರು ವರ್ಷದ ವಿದ್ಯಾರ್ಥಿಯನ್ನು ತನ್ನ ಶಾಲೆಯಲ್ಲಿ ಥಳಿಸಿ ಕೊಂದಿರುವ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.
ಮೃತ ಬಾಲಕನ್ನು ವಿವೇಕ ಎಂದು ಗುರುತಿಸಲಾಗಿದೆ. ಶಾಲೆಯ ಆವರಣದೊಳಗೆ ದುರ್ಗಾಪೂಜೆ ಆಯೋಜಿಸಲಾಗಿತ್ತು. ಈ ವೇಳೆ ವಿವೇಕ ಪೂಜೆಗೆಂದು ಇಟ್ಟಿದ್ದ ಸೇಬು ಹಣ್ಣು ತಿಂದಿದ್ದಾನೆ. ಇದರಿಂದ ಕೋಪಗೊಂಡ ಶಾಲಾ ಸಿಬ್ಬಂದಿ ಆತನನ್ನು ಶಾಲಾ ಕೊಠಡಿಗೆ ಕರೆದೊಯ್ದು ಥಳಿಸಿದ್ದಾರೆ. ನಂತರ ಅವನನ್ನು ಶಾಲೆಯಿಂದ ಹೊರಹಾಕಲಾಯಿತು.
ವಿವೇಕ ಶಾಲೆಯ ಗೇಟ್ನ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಅವನನ್ನು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವ ಮಾರ್ಗಮಧ್ಯೆ ವಿವೇಕ ಮೃತಪಟ್ಟಿದ್ದಾನೆ . ಸಾಯುವ ಮೊದಲು, ವಿವೇಕ ತನ್ನ ಎದೆಗೆ ಹೊಡೆದದ್ದನ್ನು ತನ್ನ ಕುಟುಂಬಕ್ಕೆ ತಿಳಿಸಿದ್ದಾನೆ.
ಘಟನೆ ಸಂಬಂಧ ದೂರು ದಾಖಲಾಗಿದ್ದು, ಇಲ್ಲಿನ ಬಾಕಿ ಬಿಘಾ ಗ್ರಾಮದ ಲಿಟಲ್ ಲೀಡರ್ಸ್ ಪಬ್ಲಿಕ್ ಸ್ಕೂಲ್ ಎಂಬ ಶಾಲೆ ನಡೆಸುತ್ತಿರುವ ಇಬ್ಬರನ್ನು ಬಂಧಿಸಲಾಗಿದೆ.