ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಪೊಲೀಸರ ಸಮವಸ್ತ್ರ ಹರಿದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಪೊಲೀಸರೇ ದೂರು ದಾಖಲಿಸಿದ್ದಾರೆ.
ಬೇಳೂರು ಗ್ರಾಮದ ಮಕ್ಕೀಮನೆ ನಿವಾಸಿಗಳಾದ ಕೃಷ್ಣಮೂರ್ತಿ(45), ರಾಮಚಂದ್ರ(50) ಬಂಧಿತ ಆರೋಪಿಗಳು. ಆರೋಪಿಗಳಿಂದ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ದೇವರಾಜ ನಾಯ್ಕ ದೂರು ನೀಡಿದ್ದಾರೆ.
ರವಿವಾರ ಸಂಜೆ ಕೃಷ್ಣಮೂರ್ತಿ ಮತ್ತು ರಾಮಚಂದ್ರ ಅವರನ್ನು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪಿಎಸ್ಐ ನಾಗರಾಜ್ ಹಾಗೂ ಪೊಲೀಸ್ ಸಿಬ್ಬಂದಿ ವೆಂಕಟೇಶ ಮತ್ತು ದೇವರಾಜ ನಾಯ್ಕ ಅವರ ಮೇಲೆ ಹಲ್ಲೆ ಮಾಡಿ ಸಮವಸ್ತ್ರ ಹರಿದು ಅವಾಚ್ಯವಾಗಿ ಬೈದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಹೇಳಲಾಗಿದೆ. ಠಾಣೆಯ ಪೊಲೀಸರಿಂದಲೇ ದೂರು ದಾಖಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.