ಬೈಲಹೊಂಗಲ: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಡಿ.ಬಿ ಇನಾಮದಾರ ಅವರು ಮಂಗಳವಾರ ಮುಂಜಾನೆ 9 ಗಂಟೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು.
ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನಾಮದಾರ್ ಅವರು ನ್ಯುಮೋನಿಯಾ, ಲಂಗ್ಸ್ ಇಫೆಕ್ಷನ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಮತಕ್ಷೇತ್ರದಿಂದ ಡಿ.ಬಿ.ಇನಾಂದಾರ ಅವರು ಕಾಂಗ್ರೆಸ್ ನಿಂದ 9 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ 5 ಸಲ ಶಾಸಕರಾಗಿ ಆಯ್ಕೆಯಾಗಿದ್ದರು. ಎಸ್. ಎಂ. ಕೃಷ್ಣ ಸರ್ಕಾರದ ಹಲವು ಮಹತ್ವ ಖಾತೆ ನಿಭಾಯಿಸಿದ್ದರು. ಕೆಲ ವರ್ಷ ರಾಣಿ ಶುಗರ್ಸ್ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರೂ ಆಗಿದ್ದರು. ಕಳೆದ ತಿಂಗಳು ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಸತೀಶ ಜಾರಕಿಹೊಳಿ ಅವರ ಪತ್ರಿಕಾಗೋಷ್ಠಿಯಲ್ಲಿ ಅವರು ಪಾಲ್ಗೊಂಡಿದ್ದರು.
ಈ ಬಾರಿ ಚುನಟವಣೆಯಲ್ಲಿ ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಿ.ಬಿ ಇನಾಮದಾರ ಅವರು ಕಿತ್ತೂರು ಭಾಗದ ಧಣಿ ಎಂದೇ ಖ್ಯಾತರಾಗಿದ್ದರು.
ನಾಳೆ ಬುಧವಾರ ಅವರ ಸ್ವಗ್ರಾಮ ನೇಗಿನಹಾಳದಲ್ಲಿ ಮಧ್ಯಾಹ್ನ 2 ಗಂಟೆಗೆ ಅವರ ಅಂತ್ಯಕ್ರಿಯೆ ಜರುಗಲಿದೆ.