ಶಾಲಾ ಬಸ್ ಅಪಘಾತ; ನಾಲ್ಕು ವಿದ್ಯಾರ್ಥಿಗಳು ವಿಧಿವಶ, 22 ವಿದ್ಯಾರ್ಥಿಗಳಿಗೆ ಗಾಯ

A B Dharwadkar
ಶಾಲಾ ಬಸ್ ಅಪಘಾತ; ನಾಲ್ಕು ವಿದ್ಯಾರ್ಥಿಗಳು ವಿಧಿವಶ, 22 ವಿದ್ಯಾರ್ಥಿಗಳಿಗೆ ಗಾಯ

ಬಾಗಲಕೋಟ, 29: ಶಾಲಾ ಬಸ್ ಹಾಗೂ ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿ, ಓರ್ವ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟ ದಾರುಣ ಘಟನೆ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿ ಸಂಭವಿಸಿದೆ. 22 ಮಕ್ಕಳಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಗರ ಕಡಕೋಳ (17), ಶ್ವೇತಾ (13), ಗೋವಿಂದ (13), ಬಸವರಾಜ (17) ಮೃತ ದುರ್ದೈವಿಗಳು. ಮೃತ ವಿದ್ಯಾರ್ಥಿಗಳು ಕವಟಗಿ ಗ್ರಾಮದ ಮೂಲದವರು ಎಂದು ತಿಳಿದು ಬಂದಿದೆ. ಮೃತರು ಆಲಗೂರು ಗ್ರಾಮದ ಬಳಿ ಇರುವ ಶ್ರೀ ವರ್ಧಮಾನ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಗಿಸಿಕೊಂಡು ಕವಟಗಿ ಗ್ರಾಮದ‌ ಕಡೆ ಶಾಲಾ ಬಸ್​ನಲ್ಲಿ ಹೊರಡುವಾಗ ಮಧ್ಯರಾತ್ರಿ 12 ಗಂಟೆಗೆ ಈ ದುರಂತ ಸಂಭವಿಸಿದೆ.

ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಶಾಸಕ ಜಗದೀಶ ಗುಡಗುಂಟಿ ಭೇಟಿ ನೀಡಿ, ಮೃತ ಮಕ್ಕಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹಾಗೇ ಮಾಜಿ ಶಾಸಕ ಆನಂದ ನ್ಯಾಮಗೌಡ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ಕುಟುಂಬಸ್ಥರಿಗೆ ಪರಿಹಾರ ಕೊಡಿಸುವುದಾಗಿ ಇಬ್ಬರೂ ನಾಯಕರು​​ ಭರವಸೆ ನೀಡಿದ್ದಾರೆ.

ಪೊಲೀಸ್ ವರಿಷ್ಠರ ಹೇಳಿಕೆ
——————–
ಪ್ರಕರಣ ಸಂಬಂಧ  ಬಾಗಲಕೋಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ,  ಮಧ್ಯರಾತ್ರಿ 12 ಗಂಟೆಗೆ ಆಲಗೂರು ಬಳಿ ದುರ್ಘಟನೆ ನಡೆದಿದೆ. ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ, 22 ಮಕ್ಕಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಜಮಖಂಡಿಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ವಿಜಯಪುರಕ್ಕೆ ರವಾನೆ ಮಾಡಲಾಗಿದೆ. ಅಪಘಾತ ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಹೇಳಿದರು.

ಚಾಲಕರ ವಿಚಾರಣೆ
——————-
ಶಾಲಾ ಬಸ್ ಚಾಲಕ ಮತ್ತು ಟ್ರ್ಯಾಕ್ಟರ್ ಚಾಲಕನನ್ನು ವಿಚಾರಣೆ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಟ್ರ್ಯಾಕ್ಟರ್ ಚಾಲಕರಿಗೆ ಟ್ರಾಫಿಕ್ಸ್ ರೂಲ್ಸ್ ಬಗ್ಗೆ ಅರಿವು ಮೂಡಿಸ್ತಿದ್ದೇವೆ. ಆದರೂ ಸಹ ಇಂತಹ ದುರ್ಘಟನೆ ಸಂಭವಿಸಿದ್ದು ದುರದೃಷ್ಟಕರ. ಶಾಲಾ ಬಸ್​ಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ತುಂಬಬೇಡಿ. ಬೈಕ್‌ ಸವಾರರು ಪ್ರಯಾಣಿಸುವ ವೇಳೆ, ಹೆಲ್ಮೇಟ್ ಧರಿಸಿ ಎಂದು ಮನವಿ ಮಾಡಿದರು.

ನಾಲ್ಕು ದಿನದ ಹಿಂದಿನ ಅಪಘಾತದಲ್ಲಿ ನಾಲ್ವರು ಅಸು ನೀಗಿದ್ದರು

ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಇದೇ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಬಳಿಯ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು. ಕಾಮಾಕ್ಷಿ ಬಡಿಗೇರ(30), ತುಕಾರಾಮ ತಳೇವಾಡ(30) ಮಲ್ಲು ಪೂಜಾರಿ(25), ಕಲ್ಲು ಕವಟಗಿ(35) ಮೃತ ದುರ್ದೈವಿಗಳು.

ಬಾದಾಮಿ ಬನಶಂಕರಿ ಜಾತ್ರೆಗೆ ಹೋಗಿ, ವಾಪಸ್ ತಮ್ಮ ಊರಿಗೆ ಹೋಗುವಾಗ ಅನಗವಾಡಿ ಗ್ರಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ನಿಂತಿದ್ದ ಟ್ರ್ಯಾಕ್ಟರ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಓರ್ವ ಮಹಿಳೆ ಸೇರಿಂದತೆ ನಾಲ್ವರು ಸ್ಥಳದಲ್ಲೆ ಸಾವೀಗಿಡಾಗಿದ್ದರು. ಮೃತರು ಬಸವನಬಾಗೇವಾಡಿ ತಾಲೂಕಿನ ಹೊನಗನಳ್ಳಿ ಮೂಲದವರು ಎಂದು ತಿಳಿದು ಬಂದಿತ್ತು. ಬೀಳಗಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.