ಹೊಸದಿಲ್ಲಿ, ೨೫-: ಲಖಿಂಪುರ ಖೇರಿ ರೈತರ ನರಸಂಹಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ ಮಿಶ್ರಾ ಅವರ ಪುತ್ರ ಆಶೀಶ ಮಿಶ್ರಾಗೆ ಸುಪ್ರೀಮ ಕೋರ್ಟ ಬುಧವಾರ ಮಧ್ಯಂತರ ಜಾಮೀನು ನೀಡಿದೆ.
2021 ರ ಅಕ್ಟೋಬರನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಉದ್ದೇಶಪೂರ್ವಕವಾಗಿ ವಾಹನ ಹಾಯಿಸಿದ್ದು ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಐದು ಅನ್ನದಾತರ ಹತ್ಯೆಗೆ ಕಾರಣವಾಗಿದ್ದ ಈ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಎಂಟು ವಾರಗಳ ಅವಧಿಗೆ ಮಿಶ್ರಾಗೆ ಸುಪ್ರೀಮ ಕೋರ್ಟ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಮಧ್ಯಂತರ ಜಾಮೀನಿನ ಒಂದು ವಾರದೊಳಗೆ ಉತ್ತರ ಪ್ರದೇಶ ರಾಜ್ಯವನ್ನು ತೊರೆಯುವಂತೆ ಕೋರ್ಟ ಮಿಶ್ರಾಗೆ ನಿರ್ದೇಶನ ನೀಡಿದೆ ಹಾಗೂ ಮಧ್ಯಂತರ ಜಾಮೀನಿನ ಅವಧಿಯಲ್ಲಿ ಉತ್ತರಪ್ರದೇಶ ರಾಜ್ಯ ಅಥವಾ ದೆಹಲಿ ಎನ್ಸಿಟಿಯಲ್ಲಿ ಉಳಿಯದಂತೆ ನಿರ್ದೇಶಿಸಿದೆ.
ಅಲ್ಲದೇ ತನ್ನ ಪಾಸ್ಪೋರ್ಟ ಒಪ್ಪಿಸಬೇಕು ಹಾಗೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಮಾತ್ರ ಉತ್ತರಪ್ರದೇಶ ರಾಜ್ಯವನ್ನು ಪ್ರವೇಶಿಸಬಹುದು. ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಮಿಶ್ರಾ ಅವರ ಕುಟುಂಬದ ಸದಸ್ಯರು ಮಾಡುವ ಯಾವುದೇ ಪ್ರಯತ್ನವು ಜಾಮೀನು ರದ್ದತಿಗೆ ಕಾರಣವಾಗುತ್ತದೆ ಎಂದು ಸುಪ್ರೀಮ ಕೋರ್ಟ ತಿಳಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ಪೀಠವು ಮಿಶ್ರಾ ಸಲ್ಲಿಸಿದ ಖಾಯಂ ಜಾಮೀನು ಅರ್ಜಿಯನ್ನು ಬಾಕಿ ಇರಿಸಲು ನಿರ್ಧರಿಸಿತು ಹಾಗೂ ಮಿಶ್ರಾಗೆ ಮಧ್ಯಂತರ ಜಾಮೀನು ನೀಡಿತು.
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಮಿಶ್ರಾ ಅವರು ವಾಹನ ಹಾಯಿಸಿ ರೈತರನ್ನು ಕೊಂದಿದ್ದು ಮೊಬೈಲ್ ಗಳಲ್ಲಿ ಸೆರೆಯಾಗಿತ್ತು.