ಬೆಳಿಗ್ಗೆ ೫ಕ್ಕೆ ರೂಮ್ ಖಾಲಿ ಮಾಡಿ ಹೋದ ತಹಶೀಲ್ದಾರ ಇನ್ನೂ ನಾಪತ್ತೆ, ಮೊಬೈಲ್ ಬಂದ್

A B Dharwadkar
ಬೆಳಿಗ್ಗೆ ೫ಕ್ಕೆ ರೂಮ್ ಖಾಲಿ ಮಾಡಿ ಹೋದ ತಹಶೀಲ್ದಾರ ಇನ್ನೂ ನಾಪತ್ತೆ, ಮೊಬೈಲ್ ಬಂದ್
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಹಾವೇರಿ: ಹಾವೇರಿ ತಹಶೀಲ್ದಾರ ಗಿರೀಶ್ ಸ್ವಾದಿ ಅವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಿರೀಶ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಅ. 31 ರಂದು ರಾತ್ರಿ 9:30ಕ್ಕೆ ಗಿರೀಶ ಅವರ ಪತ್ನಿ ಭಾಗ್ಯಶ್ರೀ ಅವರಿಗೆ ಕೊನೆಯ ಬಾರಿ ಕರೆ ಮಾಡಿದ್ದಾರೆ. ಪರಿಚಯಸ್ಥರಾದ ಬೆಳಗಾವಿಯ ಜಹೂರ ಅಂಗಡಿ ಅವರ ಮೊಬೈಲ್ ನಿಂದ ಕರೆ ಮಾಡಿದ್ದ ಗಿರೀಶ ರಾತ್ರಿ ಮನೆಗೆ ಬರುವುದಿಲ್ಲ. ನ. 1 ರ ಕನ್ನಡ ರಾಜ್ಯೋತ್ಸವ ಇರುವುದರಿಂದ ಹಾವೇರಿ ಪ್ರವಾಸಿ ಮಂದಿರದಲ್ಲಿ, ಇಲ್ಲವೇ ಹಾನಗಲ್ ಖಾಸಗಿ ರೆಸಿಡೆನ್ಸಿಯಲ್ಲಿ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದರು ಎನ್ನಲಾಗಿದೆ.

ವಾಹನ ಚಾಲಕ ನ. 1 ರಂದು ಬೆಳಿಗ್ಗೆ 6 ಗಂಟೆಗೆ ಸಿದ್ದೇಶ್ವರ ನಗರದಲ್ಲಿರುವ ತಹಶೀಲ್ದಾರ ಮನೆಗೆ ಬಂದು ವಿಚಾರಿಸಿದಾಗ ರಾತ್ರಿ ಮನೆಗೆ ಬಂದಿಲ್ಲ ಎಂದು ಪತ್ನಿ ತಿಳಿಸಿದ್ದಾರೆ. ನಂತರ ಕುಟುಂಬದವರು ಮತ್ತು ಕಚೇರಿ ಸಿಬ್ಬಂದಿ ವಿಚಾರಿಸಿದಾಗ ನ. 1 ರ ಬೆಳಗಿನ ಜಾವ 5 ಗಂಟೆಗೆ 112ನೇ ರೂಮ್ ಖಾಲಿ ಮಾಡಿ ಹೋಗಿರುವುದಾಗಿ ಖಾಸಗಿ ರೆಸಿಡೆನ್ಸಿ ಸಿಬ್ಬಂದಿ ತಿಳಿಸಿದ್ದಾರೆ ಎನ್ನಲಾಗಿದೆ.

ತಹಶೀಲ್ದಾರ ಗಿರೀಶ ಅನಾರೋಗ್ಯದ ಕಾರಣ ನ. 3 ರಿಂದ ಒಂದು ತಿಂಗಳು ರಜೆ ಹಾಕಿದ್ದು, ಬ್ಯಾಡಗಿ ತಹಶೀಲ್ದಾರಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ.

ತಹಶೀಲ್ದಾರ ಗಿರೀಶ 3 ದಿನದಿಂದ ನಾಪತ್ತೆಯಾಗಿ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.