ಪೆಗಾಸಸ್ ತನಿಖೆಗೆ ಕೇಂದ್ರ ಸಹಕಾರ ನೀಡಲಿಲ್ಲ; ಸಮಿತಿಯ ಗಂಭೀರ ಆರೋಪ

A B Dharwadkar
ಪೆಗಾಸಸ್ ತನಿಖೆಗೆ ಕೇಂದ್ರ ಸಹಕಾರ ನೀಡಲಿಲ್ಲ; ಸಮಿತಿಯ ಗಂಭೀರ ಆರೋಪ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಹೊಸದಿಲ್ಲಿ : ಪೆಗಾಸಸ್‌ ತಂತ್ರಾಂಶವನ್ನು ಕಾನೂನು ಬಾಹಿರವಾಗಿ ಬಳಕೆ ಮಾಡಿರುವ ಕುರಿತು ನಡೆಸುತ್ತಿರುವ ತನಿಖೆಗೆ ಕೇಂದ್ರ ಸರ್ಕಾರವು ಯಾವುದೇ ರೀತಿಯ ಸಹಕಾರ ನೀಡಲಿಲ್ಲ ಎಂದು ತನಿಖೆ ನಡೆಸಲು ರಚನೆಯಾಗಿದ್ದ ಸಮಿತಿಯು ಸುಪ್ರೀಮ ಕೋರ್ಟ್‌ಗೆ ಸಲ್ಲಿಸಿರುವ ತನ್ನ ವರದಿಯಲ್ಲಿ ಆರೋಪಿಸಿದೆ.

ಈ ಕುರಿತು ತನಿಖೆ ಕೈಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಆರ್‌.ವಿ.ರವೀಂದ್ರನ್‌ ನೇತೃತ್ವದ ಸಮಿತಿಯು ನ್ಯಾಯಾಲಯಕ್ಕೆ ಗುರುವಾರ ಅಂತಿಮ ವರದಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ‌ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇದರ ಪರಿಶೀಲನೆ ನಡೆಸಿತು.

ಪರೀಕ್ಷೆಗಾಗಿ ತಾಂತ್ರಿಕ ಸಮಿತಿಗೆ ಒಟ್ಟು 29 ಮೊಬೈಲ್‌ಗಳನ್ನು ಒದಗಿಸಲಾಗಿತ್ತು. ಈ ಪೈಕಿ ಐದು ಮೊಬೈಲ್‌ಗಳಲ್ಲಿ ಒಂದು ಬಗೆಯ ಕುತಂತ್ರಾಂಶ ಪತ್ತೆಯಾಗಿದೆ. ಬೇಹುಗಾರಿಕೆ ನಡೆಸಲೆಂದೇ ಇದನ್ನು ಬಳಸಲಾಗಿದೆಯೇ ಎಂಬುದು ಖಾತರಿಯಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಸಮಿತಿಯು ಒಟ್ಟು ಮೂರು ಹಂತಗಳನ್ನೊಳಗೊಂಡ ಸುದೀರ್ಘ ವರದಿ ಸಲ್ಲಿಸಿದೆ. ನಾಗರಿಕರ ಗೌಪ್ಯತೆಯ ಹಕ್ಕು ರಕ್ಷಿಸುವ, ಭವಿಷ್ಯದಲ್ಲಿ ಕೈಗೊಳ್ಳಬೇಕಿರುವ ಕ್ರಮ ಹಾಗೂ ಹೊಣೆಗಾರಿಕೆ ವಿಚಾರವಾಗಿ ವರದಿಯಲ್ಲಿ ಹಲವು ಸಲಹೆಗಳನ್ನು ನೀಡಲಾಗಿದೆ.

ಗೌಪ್ಯತೆಯ ರಕ್ಷಣೆ ಹಾಗೂ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಸುಧಾರಿಸುವ ಸಲುವಾಗಿ ಕಾನೂನಿನಲ್ಲಿ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶದ ಸೈಬರ್‌ ಭದ್ರತೆಯನ್ನು ಹೆಚ್ಚಿಸುವುದರ ಜೊತೆಗೆ ಅದರ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಸಲಹೆ ಸಮಿತಿ ನೀಡಿದೆ ಎಂದೂ ಪೀಠ ತಿಳಿಸಿದೆ.
ಮರುಪರಿಶೀಲಿಸಿದ ವರದಿಯನ್ನು ದೂರುದಾರರಿಗೆ ಒದಗಿಸಬೇಕು ಎಂದು ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಹಾಗೂ ರಾಕೇಶ್‌ ದ್ವಿವೇದಿ ಅವರು ಪೀಠವನ್ನು ಒತ್ತಾಯಿಸಿದರು. ವರದಿಯನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ತನಿಖಾ ಸಮಿತಿಗೆ ಕೇಂದ್ರ ಸರ್ಕಾರ ಸಹಕರಿಸಿಲ್ಲ ಎಂದು ಪೀಠ ಹೇಳಿದಾಗ, ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿಕ್ರಿಯಿಸಿದರು. ನಾಲ್ಕು ವಾರಗಳ ಬಳಿಕ ಈ ಸಂಬಂಧದ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿತು.

ಇಸ್ರೇಲ್‌ನ ಕುತಂತ್ರಾಂಶ ಪೆಗಾಸಸ್‌ ಬಳಸಿ ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಇತರರ ಮೇಲೆ ಬೇಹುಗಾರಿಕೆ ನಡೆಸಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಈ ಸಂಬಂಧ ತನಿಖೆಗಾಗಿ ಸೈಬರ್‌ ಭದ್ರತೆ, ಡಿಜಿಟಲ್‌ ವಿಧಿವಿಜ್ಞಾನ, ನೆಟ್ವರ್ಕ್‌ ಮತ್ತು ಹಾರ್ಡ್‌ವೇರ್‌ ವಿಷಯದಲ್ಲಿ ಪರಿಣತಿ ಹೊಂದಿದ್ದ ನವೀನ‌ಕುಮಾರ ಚೌಧರಿ, ಪಿ.ಪ್ರಬಹರನ್‌ ಮತ್ತು ಅಶ್ವಿನ‌ ಅನಿಲ‌ ಗುಮಾಸ್ತೆ ಅವರನ್ನೊಳಗೊಂಡ ಸಮಿತಿಯೊಂದನ್ನು ಸುಪ್ರೀಮ ಕೋರ್ಟ ಕಳೆದ ವರ್ಷ ರಚಿಸಿತ್ತು.

ನಿವೃತ್ತ ನ್ಯಾಯಮೂರ್ತಿ ರವೀಂದ್ರನ್‌ ಅವರಿಗೆ ಇದರ ಮೇಲ್ವಿಚಾರಣೆ ಜವಾಬ್ದಾರಿ ನೀಡಲಾಗಿತ್ತು. ಮಾಜಿ ಐಪಿಎಸ್‌ ಅಧಿಕಾರಿ ಅಲೋಕ್‌ ಜೋಶಿ ಹಾಗೂ ಸೈಬರ್‌ ಭದ್ರತಾ ತಜ್ಞ ಸಂದೀಪ‌ ಒಬೆರಾಯ್‌ ಅವರನ್ನು ಇವರ ಸಹಾಯಕರನ್ನಾಗಿ ನೇಮಿಸಲಾಗಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.