ಬೆಂಗಳೂರು: ಚಿತ್ರದುರ್ಗ ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿಎಸ್ ವಸ್ತ್ರದ ಅವರನ್ನು ನೇಮಕ ಮಾಡಿದ್ದ ರಾಜ್ಯ ಬೊಮ್ಮಾಯಿ ಸರಕಾರದ ಆದೇಶವನ್ನು ರಾಜ್ಯ ಹೈಕೋರ್ಟ ಸೋಮವಾರ ರದ್ದುಗೊಳಿಸಿದೆ.
ರಾಜ್ಯ ಸರ್ಕಾರಕ್ಕೆ ಆಡಳಿತಾಧಿಕಾರಿ ನೇಮಿಸುವ ಹಕ್ಕಿಲ್ಲ ಎಂದಿರುವ ಕೋರ್ಟ ವಸ್ತ್ರದ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೋರ್ಟ ರದ್ದುಗೊಳಿಸಿದೆ.
ಆಡಳಿತಾಧಿಕಾರಿ ನೇಮಕದ ಕುರಿತು ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಲಾಗಿದೆ. ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದಿಕ್ಷೀತ ಅವರಿದ್ದ ಏಕಸದಸ್ಯ ನ್ಯಾಯಪೀಠ ಸ್ಪಷ್ಟಪಡಿಸಿದೆ. ಸರ್ಕಾರವು ಆಡಳಿತಾಧಿಕಾರಿಯನ್ನು ನೇಮಕ ಮಾಡಿರುವುದನ್ನು ಎಸ್ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಪ್ರಶ್ನಿಸಿ ಕೋರ್ಟಗೆ ಅರ್ಜಿ ಸಲ್ಲಿಸಿದ್ದರು.
ಮುರುಘಾಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಅಧಿಕಾರವು ಸರಕಾರಕ್ಕೆ ಇರುವುದಿಲ್ಲ. ಮಠ ಮತ್ತು ಶೈಕ್ಷಣಿಕ ಆಡಳಿತ ನಿರ್ವಹಣೆಗೆ ಮಠದ ಭಕ್ತರು, ಲಿಂಗಾಯತ ಸಮುದಾಯದ ಮುಖಂಡರು ನಿರ್ಧರಿಸಬಹುದು. ಮುಂದಿನ ನಾಲ್ಕು ವಾರಗಳ ಕಾಲ ಸರ್ಕಾರ ನೇಮಕ ಮಾಡಿರುವಂತಹ ಆಡಳಿತಾಧಿಕಾರಿ ಮುಂದುವರೆಯಬಹುದು ಎಂದು ಕೋರ್ಟ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ ಅವರನ್ನು ನೇಮಿಸಲಾಗಿತ್ತು. ವಸ್ತ್ರದ ಅವರನ್ನು ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ನೇಮಿಸಿ ರಾಜ್ಯ ಸರ್ಕಾರ ಉಪಕಾರ್ಯದರ್ಶಿ ಟಿಸಿ ಕಾಂತರಾಜು ಆದೇಶ ಹೊರಡಿಸಿದ್ದರು.
ಭಾರತದ ಸಂವಿಧಾನದ 162ನೇ ವಿಧಿಯಡಿ ಸರ್ಕಾರವು ಆಡಳಿತಾಧಿಕಾರಿ ನೇಮಕ ಮಾಡಿರುವುದು ಕಾನೂನಿಗೆ ವಿರುದ್ಧವಾದದ್ದು ಮಠಗಳ ಮೇಲೆ ನಿಯಂತ್ರಣ ಹೊಂದಲು ಸರ್ಕಾರಕ್ಕೆ ಕಾನೂನಿನಡಿ ಅವಕಾಶವಿಲ್ಲ. ಈ ರೀತಿ ನಿಯಂತ್ರಣ ಹೊಂದಲು ಸಿವಿಲ್ ಪ್ರೊಸೀಜರ್ ಕೋಡ್ ಅನುಸಾರ ಕಲಂ 92ರ ಅಡಿಯಲ್ಲಿ ಸಾಧ್ಯ. ಈ ಪ್ರಕರಣದಲ್ಲಿ ರಾಜ್ಯ ಸರಕಾರ ಹೊರಡಿಸಿರುವ ಆದೇಶ ರದ್ದುಪಡಿಸಿ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.