ಹೊಸದಿಲ್ಲಿ, ಜುಲೈ 2: ರೈಲುಗಳಲ್ಲಿ ಪ್ರಯಾಣಿಕರ ಸುರಕ್ಷತೆ, ಸ್ವಚ್ಛತೆ ಮತ್ತು ಶಿಸ್ತನ್ನು ಕಾಪಾಡುವ ಉದ್ದೇಶದಿಂದ ಭಾರತೀಯ ರೈಲ್ವೆ ಧೂಮಪಾನ, ಭಿಕ್ಷಾಟನೆ ಹಾಗೂ ಅನಧಿಕೃತ ವ್ಯಾಪಾರದ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಹೊಸ ನಿಯಮಗಳ ಪ್ರಕಾರ ರೈಲು ಅಥವಾ ರೈಲು ನಿಲ್ದಾಣಗಳಲ್ಲಿ ಇಂತಹ ಕೃತ್ಯಗಳಲ್ಲಿ ತೊಡಗಿದರೆ ₹2,000 ದಂಡ ವಿಧಿಸಲಾಗುತ್ತದೆ.
ರೈಲಿನಲ್ಲಿ ಸಿಗರೇಟ್ ಅಥವಾ ಇತರೆ ಯಾವುದೇ ರೀತಿಯ ಧೂಮಪಾನ ನಡೆಸಿದರೆ ₹2,000 ದಂಡ ವಿಧಿಸಲಾಗುತ್ತದೆ. ದಂಡ ಪಾವತಿಸಲು ನಿರಾಕರಿಸಿದರೆ ಪ್ರಕರಣವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುತ್ತದೆ. ನ್ಯಾಯಾಲಯವು ಪರಿಸ್ಥಿತಿಯನ್ನು ಪರಿಗಣಿಸಿ ಗರಿಷ್ಠ ₹5,000 ದಂಡ ವಿಧಿಸುವ ಅಧಿಕಾರ ಹೊಂದಿದೆ.
ರೈಲುಗಳಲ್ಲಿ ಅಥವಾ ರೈಲು ನಿಲ್ದಾಣಗಳಲ್ಲಿ ಅಗತ್ಯ ಪರವಾನಗಿ ಇಲ್ಲದೆ ಯಾವುದೇ ವಸ್ತುಗಳನ್ನು ಮಾರಾಟ ಮಾಡುವ ಅನಧಿಕೃತ ವ್ಯಾಪಾರಿಗಳ ಮೇಲೂ ₹2,000 ದಂಡ ವಿಧಿಸಲಾಗುತ್ತದೆ. ಈ ಕ್ರಮದಿಂದ ಅನಧಿಕೃತ ವ್ಯಾಪಾರವನ್ನು ನಿಯಂತ್ರಿಸುವುದು ರೈಲ್ವೆಯ ಉದ್ದೇಶವಾಗಿದೆ.
ರೈಲು ಅಥವಾ ರೈಲು ನಿಲ್ದಾಣಗಳಲ್ಲಿ ಭಿಕ್ಷಾಟನೆ ನಡೆಸಿದರೆ ₹2,000 ದಂಡ ವಿಧಿಸಲಾಗುತ್ತದೆ. ಪ್ರಕರಣ ನ್ಯಾಯಾಲಯಕ್ಕೆ ಹೋದರೆ ಗರಿಷ್ಠ ಮೂರು ತಿಂಗಳ ಜೈಲು ಶಿಕ್ಷೆ, ₹5,000 ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಒಂದೇ ರೀತಿಯ ಅಪರಾಧವನ್ನು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಬಾರಿ ಪುನರಾವರ್ತಿಸುವವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಂತಹವರಿಗೆ ಗರಿಷ್ಠ ಒಂದು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ₹5,000 ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ಹೊಸ ನಿಯಮಗಳ ಮೂಲಕ ರೈಲುಗಳಲ್ಲಿ ಪ್ರಯಾಣಿಕರಿಗೆ ಸುರಕ್ಷಿತ, ಸ್ವಚ್ಛ ಮತ್ತು ಶಿಸ್ತುಬದ್ಧ ವಾತಾವರಣ ಕಲ್ಪಿಸುವುದು ಭಾರತೀಯ ರೈಲ್ವೆಯ ಪ್ರಮುಖ ಉದ್ದೇಶವಾಗಿದೆ ಎನ್ನಲಾಗಿದೆ. ರೈಲುಗಳಲ್ಲಿ ಧೂಮಪಾನ ಹಾಗೂ ಭಿಕ್ಷಾಟನೆಗೆ ದಂಡ ವಿಧಿಸುವ ಕ್ರಮ ಪ್ರಯಾಣಿಕರ ಸುರಕ್ಷತೆ ಮತ್ತು ಶಿಸ್ತಿನ ದೃಷ್ಟಿಯಿಂದ ಸಮರ್ಥನೀಯವಾಗಿದೆ. ಆದರೆ ಜೀವನೋಪಾಯಕ್ಕಾಗಿ ರೈಲುಗಳಲ್ಲಿ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುವ ಬಡ ವ್ಯಾಪಾರಿಗಳ ಮೇಲೂ ಅದೇ ರೀತಿಯ ಕಠಿಣ ದಂಡ ವಿಧಿಸುವುದು ನ್ಯಾಯಸಮ್ಮತವೇ ಎಂಬ ಪ್ರಶ್ನೆ ಮೂಡಿದೆ. ಒಂದೆಡೆ ಅದಾನಿಗೆ ಕೇವಲ ೧ ರೂಪಾಯಿಗೆ ಎಕರೆಯಂತೆ ಸಾವಿರಾರು ಎಕರೆ ಅರಣ್ಯ ಭೂಮಿ ಗಣಿಗಾರಿಕೆ ನಡೆಸಲು ಕೊಡುತ್ತದೆ, ಮತ್ತೊಂದೆಡೆ ಹೊಟ್ಟೆಪಾಡಿಗಾಗಿ ಸಣ್ಣ ವ್ಯಾಪಾರ ಮಾಡುವ ಬಡವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಚರ್ಚೆಗೆ ಗ್ರಾಸವಾಗಿದೆ.