ಹೊಸದಿಲ್ಲಿ, ಜುಲೈ 25: ಜಂತರ್ ಮಂತರ್ನಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪ್ರತಿಭಟನಾಕಾರರಿಗೆ ಆಹಾರ ಮತ್ತು ಕುಡಿಯುವ ನೀರು ಪೂರೈಸುತ್ತಿದ್ದ ಸ್ವಯಂಸೇವಕ ಮೊಹಮ್ಮದ ಜುನೈದ ಅವರ ಮನೆಯ ಮೇಲೆ ಉತ್ತರ ಪ್ರದೇಶ ಪೊಲೀಸರು ದಾಳಿ ನಡೆಸಿದ್ದು, ಅವರ ಕುಟುಂಬದ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆರೋಪಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಜೆಪಿ, "ಅಪರಾಧಿಗಳನ್ನು ಬಂಧಿಸುವ ಬದಲು, ಪ್ರತಿಭಟನಾಕಾರರಿಗೆ ಆಹಾರ ಮತ್ತು ನೀರು ಪೂರೈಸುತ್ತಿದ್ದ ನಮ್ಮ ಸ್ವಯಂಸೇವಕ ಮೊಹಮ್ಮದ ಜುನೈದ್ ಮತ್ತು ಅವರ ಕುಟುಂಬವನ್ನು ಉತ್ತರ ಪ್ರದೇಶ ಪೊಲೀಸರು ಗುರಿಯಾಗಿಸಿಕೊಂಡಿದ್ದಾರೆ. ಸರ್ಕಾರದ ಈ ರೀತಿಯ ಭಿನ್ನಾಭಿಪ್ರಾಯ ದಮನದ ಕ್ರಮಗಳು ಹೊಸದೇನಲ್ಲ. ಆದರೆ ಇಂತಹ ಹೇಡಿ ಕೃತ್ಯಗಳಿಗೆ ನಾವು ಹೆದರುವುದಿಲ್ಲ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಜುನೈದ್ ಹಾಗೂ ಅವರ ಕುಟುಂಬದೊಂದಿಗೆ ಪಕ್ಷ ನಿರಂತರ ಸಂಪರ್ಕದಲ್ಲಿದ್ದು, ಅವರಿಗೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವುದಿಲ್ಲ. ಪೊಲೀಸ್ ಇಲಾಖೆ ಕೈಗೊಳ್ಳುವ ಪ್ರತಿಯೊಂದು ಕಾನೂನುಬಾಹಿರ ಕ್ರಮವನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಸಿಜೆಪಿ ಎಚ್ಚರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೊಹಮ್ಮದ ಜುನೈದ, "ಸಂಜೆ ಪೊಲೀಸರು ನನ್ನ ಮನೆಗೆ ಬಂದು ನನ್ನ ತಂದೆಯನ್ನು ಕರೆದೊಯ್ದರು. ಮೀರತ್ನಲ್ಲಿ ವಾಸಿಸುವ ನನ್ನ ಸಹೋದರಿಯ ಮಾವನನ್ನೂ ವಶಕ್ಕೆ ಪಡೆದಿದ್ದಾರೆ. ನಮ್ಮ ಕುಟುಂಬದ ಸದಸ್ಯರ ಬ್ಯಾಂಕ್ ಪಾಸ್ ಬುಕ್ಗಳು ಹಾಗೂ ಆಧಾರ್ ಕಾರ್ಡಗಳನ್ನು ವಶಪಡಿಸಿಕೊಂಡಿದ್ದಾರೆ. ನಾನು ಯಾವುದೇ ಅಪರಾಧ ಮಾಡಿಲ್ಲ. ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರಿಗೆ ಸೇವೆ ಸಲ್ಲಿಸಿದ್ದೇ ನನ್ನ ತಪ್ಪೇ?" ಎಂದು ಪ್ರಶ್ನಿಸಿದ್ದಾರೆ.
ಜೂನ್ 20ರಂದು ಪ್ರತಿಭಟನೆ ಆರಂಭವಾದ ದಿನದಿಂದಲೇ ಜುನೈದ ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರಿಗೆ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದರು. "ದೇಶದ ಯುವಜನರನ್ನು ಕತ್ತಲೆಗೆ ತಳ್ಳಿದರೆ ದೇಶದ ಭವಿಷ್ಯವೇ ಅಪಾಯಕ್ಕೆ ಸಿಲುಕುತ್ತದೆ" ಎಂಬ ಕಾರಣದಿಂದ ತಾವು ಈ ಸೇವೆಯಲ್ಲಿ ತೊಡಗಿದ್ದಾಗಿ ಅವರು ತಿಳಿಸಿದ್ದಾರೆ.
ಇದೇ ಆರೋಪವನ್ನು ಜೆಎನ್ಯು ವಿದ್ಯಾರ್ಥಿ ನಾಯಕ ಡ್ಯಾನಿಶ ಅಲಿ ಕೂಡ ಪುನರುಚ್ಚರಿಸಿದ್ದು, ಪ್ರತಿಭಟನೆಯ ಮೊದಲ ದಿನದಿಂದ ವಿದ್ಯಾರ್ಥಿಗಳಿಗೆ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದ ಮೊಹಮ್ಮದ್ ಜುನೈದ್ ಅವರ ಮನೆಯ ಮೇಲೆ ಉತ್ತರ ಪ್ರದೇಶ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
