ಹೊಸದಿಲ್ಲಿ, ಜುಲೈ 25: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿರುವುದನ್ನು ವಿರೋಧ ಪಕ್ಷಗಳ ನಾಯಕರು ಹಾಗೂ ವಿವಿಧ ಸಾರ್ವಜನಿಕ ಮುಖಂಡರು ಸ್ವಾಗತಿಸಿದ್ದು, ಇದನ್ನು ಪ್ರಜಾಪ್ರಭುತ್ವ, ವಿದ್ಯಾರ್ಥಿ ಹೋರಾಟ ಮತ್ತು ಯುವಜನರ ಗೆಲುವು ಎಂದು ಬಣ್ಣಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಧರ್ಮೇಂದ್ರ ಪ್ರಧಾನರ ರಾಜೀನಾಮೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಪುನರ್ನಿರ್ಮಿಸುವ ನಿಟ್ಟಿನಲ್ಲಿ ಇಡಲಾದ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. "ಪ್ರಜಾಪ್ರಭುತ್ವ, ದೇಶದ ಭವಿಷ್ಯ ಮತ್ತು ಸಂವಿಧಾನದ ರಕ್ಷಣೆಗಾಗಿ ಬೀದಿಗಿಳಿದು ಹೋರಾಡಿದ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಯುವಜನರಿಗೆ ಅಭಿನಂದನೆಗಳು. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ಅವರು ತಿಳಿಸಿದ್ದಾರೆ.
ಸಮಾಜಸೇವಕ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ, ಈ ಬೆಳವಣಿಗೆಯನ್ನು ಪ್ರಜಾಪ್ರಭುತ್ವ ಮತ್ತು ಸಾರ್ವಜನಿಕ ಹೊಣೆಗಾರಿಕೆಗೆ ಸಂದ ಜಯ ಎಂದು ಬಣ್ಣಿಸಿದ್ದಾರೆ. "ಇದು ಶಾಂತಿ, ತಾಳ್ಮೆ ಮತ್ತು ನಿರಂತರ ಹೋರಾಟಕ್ಕೆ ದೊರೆತ ಗೆಲುವು. ಭಯವನ್ನು ಮೀರಿ ಹೋರಾಡಿದ ಯುವಜನತೆ ಹಾಗೂ ಪ್ರತಿಯೊಬ್ಬ ನಾಗರಿಕರಿಗೂ ಅಭಿನಂದನೆಗಳು. ಈಗ ಹೊಣೆಗಾರಿಕೆಯಿಂದ ಸುಧಾರಣೆಯತ್ತ ಸಾಗಬೇಕಿದೆ" ಎಂದು ಅವರು ಹೇಳಿದ್ದಾರೆ.
ರಾಜೀನಾಮೆ ಘೋಷಣೆಯಾದ ತಕ್ಷಣ ದೆಹಲಿಯ ಜಂತರ್ ಮಂತರ್ನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ ದೀಪ್ಕೆ, "ಸುಬಹ್ ಹೋ ಗಯಿ ಮಾಮು" ಎಂದು ಹೇಳುತ್ತಿದ್ದಂತೆ ಪ್ರತಿಭಟನಾಕಾರರು ಹರ್ಷೋದ್ಗಾರ ವ್ಯಕ್ತಪಡಿಸಿದರು. "ಶಾಂತಿಯುತ ಪ್ರತಿಭಟನೆಯ ಮೂಲಕವೂ ಸರ್ಕಾರವನ್ನು ತಲೆಬಾಗುವಂತೆ ಮಾಡಬಹುದು ಎಂಬುದಕ್ಕೆ ಈ ಗೆಲುವೇ ಸಾಕ್ಷಿ. ಇದು ಆರಂಭ ಮಾತ್ರ; ಹೋರಾಟ ಇನ್ನೂ ಮುಗಿದಿಲ್ಲ" ಎಂದು ಅವರು ಹೇಳಿದರು. ಬಳಿಕ ಪ್ರತಿಭಟನಾಕಾರರು ಪರಸ್ಪರ ಅಭಿನಂದಿಸಿಕೊಂಡು ಸಂಭ್ರಮಾಚರಣೆ ನಡೆಸಿದರು.
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಈ ಬೆಳವಣಿಗೆಯನ್ನು ಭಾರತದ ಯುವಜನತೆಗೆ ಸಂದ ಜಯ ಎಂದು ಬಣ್ಣಿಸಿದ್ದಾರೆ. "ಮಹಾತ್ಮ ಗಾಂಧಿ ತೋರಿದ ಅಹಿಂಸೆಯ ಮಾರ್ಗದಲ್ಲೇ ಯುವಜನತೆ ತಮ್ಮ ಹೋರಾಟವನ್ನು ಯಶಸ್ವಿಗೊಳಿಸಿದೆ. ದೇಶದ ಜನತೆ ತಮ್ಮ ದೇಶವನ್ನು ಮರಳಿ ತಮ್ಮದಾಗಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.
ಎನ್ಸಿಪಿ (ಶರದ್) ಅಧ್ಯಕ್ಷ ಶರದ ಪವಾರ, ಜಂತರ್ ಮಂತರ್ನಲ್ಲಿ ಯುವಜನರು ತೋರಿದ ಹೋರಾಟ ಮತ್ತು ದೃಢಸಂಕಲ್ಪವನ್ನು ಶ್ಲಾಘಿಸಿದ್ದಾರೆ. ಪ್ರತಿಭಟನಾಕಾರರ ಬೇಡಿಕೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿರುವುದು ಪ್ರಜಾಪ್ರಭುತ್ವದ ಶಕ್ತಿಗೆ ಸಾಕ್ಷಿಯಾಗಿದೆ. ಇದು ದೇಶದ ಯುವಶಕ್ತಿಯ ಏಕತೆಗೆ ದೊರೆತ ಮಹತ್ವದ ಗೆಲುವು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವಂತೆ ದೇಶಾದ್ಯಂತ ಧ್ವನಿ ಎತ್ತಿದ ಲಕ್ಷಾಂತರ ಯುವಜನರ ಗೆಲುವಿದು. "ಇದು ಸತ್ಯಕ್ಕೆ ಸಂದ ಜಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹಠಮಾರಿತನಕ್ಕೆ ಆದ ಸೋಲು. ಈ ಭ್ರಷ್ಟ ಆಡಳಿತದಿಂದ ತೊಂದರೆ ಅನುಭವಿಸಿದ ಎಲ್ಲ ಕುಟುಂಬಗಳಿಗೆ ದೊರೆತ ನ್ಯಾಯದ ಗೆಲುವು" ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಕೂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದು, ಧರ್ಮೇಂದ್ರ ಪ್ರಧಾನರ ರಾಜೀನಾಮೆಯನ್ನು ಪ್ರಜಾಪ್ರಭುತ್ವದ ಮಹಾನ್ ಜಯ ಎಂದು ಬಣ್ಣಿಸಿದ್ದಾರೆ.
