ಅಳ್ನಾವರ, 13: ಸಮೀಪದ ಬೀಡಿ ಹೋಬಳಿಯ ಕರಿಕಟ್ಟಿ ಹದ್ದೆಯ ಸರ್ವೇ ನಂ. 05ರಲ್ಲಿರುವ ಸ್ಥಳೀಯ ರೈತ ಸೇಬಸ್ತೀನ್ ಬಾವತಿಸ ಸೋಜ ಅವರ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಯನ್ನು ಕಾಡುಹಂದಿಗಳು ತಿಂದು ಹಾಳು ಮಾಡಿರುವ ಘಟನೆ ಬುಧವಾರ ನಡೆದಿದೆ.
ರೈತ ಸೇಬಸ್ತೀನ್ ಅವರು ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು, ಅದರಿಂದ ಬರುವ ಆದಾಯದಿಂದ ಕುಟುಂಬದ ಜೀವನ ಸಾಗಿಸುತ್ತಿದ್ದಾರೆ. ಈ ಬಾರಿ ಉತ್ತಮ ಕಬ್ಬಿನ ಫಸಲು ಬೆಳೆದಿದ್ದು, ಫಸಲು ಕೈಗೆ ಬರುವ ಹಂತದಲ್ಲಿತ್ತು. ಆದರೆ, ಕಾಡುಹಂದಿಗಳ ಹಾವಳಿಯಿಂದ ಸಂಪೂರ್ಣ ಬೆಳೆ ನಾಶವಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಕಾಡುಹಂದಿಗಳ ದಾಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರು ತೀವ್ರ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಿ, ನಷ್ಟದ ಅಂದಾಜು ಮಾಡಬೇಕು. ಸರ್ಕಾರದಿಂದ ರೈತನಿಗೆ ಸೂಕ್ತ ಪರಿಹಾರ ಮಂಜೂರು ಮಾಡಬೇಕು ಎಂದು ರೈತ ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.
ರೈತ ಸಂಘಟನೆಯ ಮುಖಂಡರಾದ ಯಲ್ಲಪ್ಪ ಚನ್ನಾಪುರ, ಕಿಶೋರ ಮಿಠಾರಿ, ರಮಾನಂದ ಅಂಬಡಗಟ್ಟಿ, ಅಂತೋನ್ ಸೋಜ, ಬಿಸ್ವಪ್ಪ ಸುಂಬಳಿ, ರಮೇಶ ವೀರಾಪುರ, ಶಿವಾಜಿ ಅಂಬಡಗಟ್ಟಿ ಹಾಗೂ ಗೋಪಾಲ ಅಗಸಿಮನಿ ಸೇರಿದಂತೆ ಹಲವರು ಸರ್ಕಾರವನ್ನು ಆಗ್ರಹಿಸಿದ್ದಾರೆ.