ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದರೆಂದು ಟ್ಯಾಂಕ್ ಸ್ವಚ್ಛ ಮಾಡಿದ್ದ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಪವಿಭಾಗಾಧಿಕಾರಿ ಗೀತಾ ಹುಡೇದ, ಚಾಮರಾಜನಗರ ತಹಶೀಲ್ದಾರ ಬಸವರಾಜು ಹಾಗು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸಭೆ ನಡೆಸಿದರು.
ಸಭೆ ಬಳಿಕ ತಹಶೀಲ್ದಾರ ಬಸವರಾಜು ಅವರು ಗ್ರಾಮದ ಎಲ್ಲಾ ಸಾರ್ವಜನಿಕ ನಲ್ಲಿಗಳಿಗೆ ತೆರಳಿ ದಲಿತ ಯುವಕರಿಗೆ ನೀರು ಕುಡಿಸಿದ್ದಾರೆ. ಜೊತೆಗೆ, ತೊಂಬೆಗಳ ಮೇಲೆ ಇದು ಸಾರ್ವಜನಿಕ ಆಸ್ತಿಯಾಗಿದ್ದು, ಎಲ್ಲಾ ಸಮುದಾಯದವರು ಇದನ್ನು ಬಳಸಬಹುದು ಎಂದು ಬರೆಸಿದ್ದಾರೆ.
ಗ್ರಾಮದ ಯುವಕನಿಂದ ದೂರೊಂದನ್ನು ಪಡೆದಿದ್ದು, ನೊಂದ ಮಹಿಳೆಯನ್ನು ಪತ್ತೆಹಚ್ಚಲು ತಾಲೂಕು ಆಡಳಿತ ಮುಂದಾಗಿದೆ. ಬಳಿಕ, ಆ ಮಹಿಳೆಯಿಂದಲೂ ದೂರನ್ನು ಪಡೆದು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.