ನಾಸಿಕ್, ಸೆ. 17 : ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಶಿವಸೇನೆ (ಯುಬಿಟಿ) ಯುವ ಘಟಕದ ಕಾರ್ಯಕರ್ತರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ಕಚೇರಿಗೆ ಬೀದಿ ನಾಯಿಗಳನ್ನು ತಂದು ಮುಖ್ಯಾಧಿಕಾರಿಯ ಮೇಜಿನ ಮೇಲೆ ಬಿಟ್ಟು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುವ ಸೇನೆಯ ಜಿಲ್ಲಾ ಮುಖ್ಯಸ್ಥ ವಿಕ್ರಮ್ ರಾಂಧವೆ ನೇತೃತ್ವದಲ್ಲಿ ಕಾರ್ಯಕರ್ತರು ಚೀಲಗಳಲ್ಲಿ ಸಣ್ಣ ನಾಯಿಗಳನ್ನು ಕಚೇರಿಗೆ ತಂದಿದ್ದರು. ಬಳಿಕ ಚೀಲಗಳನ್ನು ತೆರೆದು ಮುಖ್ಯಾಧಿಕಾರಿ ಧೀರಜ್ ಭಾಮ್ರೆ ಅವರ ಮೇಜಿನ ಮೇಲೆ ನಾಯಿಗಳನ್ನು ಬಿಟ್ಟರು. ಆಡಳಿತದ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸುವ ಸಲುವಾಗಿ ಮೇಜಿನ ಮೇಲೆ ಕರೆನ್ಸಿ ನೋಟುಗಳಿಂದ ಮಾಡಿದ ಹಾರವನ್ನೂ ಇರಿಸಲಾಯಿತು.
ನಿಫಾದ್ ಹಾಗೂ ಸುತ್ತಮುತ್ತ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ನಾಯಿ ಕಡಿತದ ಘಟನೆಗಳಿಂದ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ದ್ವಿಚಕ್ರ ವಾಹನ ಸವಾರರಲ್ಲಿ ಆತಂಕ ಉಂಟಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಳೆದ ಆರು ತಿಂಗಳಿಂದ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ರಾಂಧವೆ ದೂರಿದರು.
ಬೀದಿ ನಾಯಿಗಳ ಸಂತಾನಹರಣ ಹಾಗೂ ಅವುಗಳ ಸಂಖ್ಯೆ ನಿಯಂತ್ರಿಸಲು ಸಮರ್ಪಕ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿಯೂ ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಧೀರಜ್ ಭಾಮ್ರೆ, ಬೀದಿ ನಾಯಿ ಸಮಸ್ಯೆ ಪರಿಹರಿಸಲು ನಗರ ಪಂಚಾಯತ್ ಈಗಾಗಲೇ ಕ್ರಮ ಆರಂಭಿಸಿದ್ದು, ಸಂತಾನಹರಣ ಸೇರಿದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.