ಅಥಣಿ, ಜುಲೈ 27: ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಸಮರ್ಪಕ ಬಸ್ ಸೌಲಭ್ಯ ಇಲ್ಲದ ಕಾರಣ ಶಾಲೆ ಮತ್ತು ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಪ್ರತಿದಿನ ಜೀವವನ್ನು ಪಣಕ್ಕಿಟ್ಟು ಫುಟ್ಬೋರ್ಡ್ನಲ್ಲಿ ನೇತಾಡುತ್ತ ಪ್ರಯಾಣಿಸುವ ದುಸ್ಥಿತಿ ಮುಂದುವರಿದಿದೆ.
ಗ್ರಾಮದಿಂದ ಅಥಣಿ ಪಟ್ಟಣಕ್ಕೆ ದಿನಕ್ಕೆ ಒಂದೇ ಬಸ್ ಸಂಚರಿಸುತ್ತಿದ್ದು, ಇದೇ ಬಸ್ ನೂರಾರು ವಿದ್ಯಾರ್ಥಿಗಳ ಏಕೈಕ ಆಸರೆಯಾಗಿದೆ. ಬಸ್ ತಪ್ಪಿದರೆ ಆ ದಿನ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಹಾಜರಾತಿ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅಪಾಯವನ್ನು ಲೆಕ್ಕಿಸದೆ ಪ್ರಯಾಣಿಸಲು ಅನಿವಾರ್ಯರಾಗಿದ್ದಾರೆ.
ಪ್ರಯಾಣಿಕರಿಂದ ತುಂಬಿ ತುಳುಕುವ ಬಸ್ನ ಫುಟ್ಬೋರ್ಡ್ ಮೇಲೆ ಪ್ರೌಢಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿನಿಯರು ಸೇರಿದಂತೆ ಹಲವರು ನೇತಾಡುತ್ತ ಸಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಚಿಕ್ಕದೊಂದು ಆಯತಪ್ಪಿದರೂ ಭಾರೀ ಅನಾಹುತ ಸಂಭವಿಸುವ ಆತಂಕ ವ್ಯಕ್ತವಾಗಿದೆ.
ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಪ್ರತಿನಿಧಿಸುವ ಕಾಗವಾಡ ಕ್ಷೇತ್ರದ ಪಕ್ಕದಲ್ಲಿರುವ ಅಥಣಿ ಕ್ಷೇತ್ರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸದ ಕಾರಣ ನಿತ್ಯ ಜೀವದ ಹಂಗು ತೊರೆದು ಪ್ರಯಾಣಿಸಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ತಕ್ಷಣವೇ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಾರಿಗೆ ಇಲಾಖೆಗೆ ಆಗ್ರಹಿಸಿದ್ದಾರೆ.

