ಮೈಸೂರು, ೧೬- ಪಾರಂಪರಿಕ ನಗರಿಯ ಮಹತ್ವ ಸಾರುವ ಸಲುವಾಗಿ ಅರಮನೆ ವಿನ್ಯಾಸದ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆಯೇ ಹೊರತು ಯಾವುದೇ ಧರ್ಮದ ಆಧಾರದಲ್ಲಲ್ಲ ಎಂದು ಬಿಜೆಪಿಯ ಶಾಸಕ ಆಶ್ವಥ ನಾರಾಯಣದಾಸ ರಾಮದಾಸ್ ಅವರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಕಳಶ ರಾತ್ರೋರಾತ್ರಿ ಅಳವಡಿಸಲಾಗಿಲ್ಲ. ಕಳೆದ ವಾರವೇ ಇದನ್ನು ಹಾಕಲಾಗಿದೆ ಎಂದು ರಾಮದಾಸ್ ಹೇಳಿದ್ದಾರೆ.
ಮೈಸೂರಿನ ಊಟಿ ರಸ್ತೆಯ ಜೆಎಸ್ಎಸ್ ಕಾಲೇಜು ಬಳಿ ನಿರ್ಮಿಸಿರುವ ಬಸ್ ನಿಲ್ದಾಣವು ಗುಂಬಜ್ ಮಾದರಿಯಲ್ಲಿದೆ ಎಂದು ಕಿಡಿ ಕಾರಿದ್ದ ಸಂಸದ ಪ್ರತಾಪ್ ಸಿಂಹ, ಇದನ್ನು ತೆರವುಗೊಳಿಸದಿದ್ದರೆ ನಾನೇ ಈ ಕೆಲಸ ಮಾಡುತ್ತೇನೆ ಎಂದು ಗುಡುಗಿದ್ದರು.
ಅಲ್ಲದೇ ಈ ಮೊದಲು ನಿಲ್ದಾಣದ ಕಟ್ಟಡದ ಮೇಲೆ ಗುಂಬಜ್ ಮಾತ್ರ ಇತ್ತು. ನಾನು ಈ ಕುರಿತು ಹೇಳಿಕೆ ನೀಡಿದ ಬಳಿಕ ಅದರ ಮೇಲೆ ಕಳಶ ಬಂದಿದೆ ಇದು ಹೇಗೆ ಎಂದು ಪ್ರಶ್ನಿಸಿದ್ದ ಪ್ರತಾಪ್ ಸಿಂಹ, ಶಾಸಕ ರಾಮದಾಸ್ ಈ ಕುರಿತು ಮೌನ ವಹಿಸಿದ್ದಾರೆ ಎಂದರೆ ಅವರ ಸಹಮತ ಇದೆ ಎಂದೇ ಅರ್ಥ ಎಂದು ಹೇಳಿದ್ದರು. ಇದಕ್ಕೆ ಈ ಕುರಿತಂತೆ ರಾಮದಾಸ್ ಪ್ರತಿಕ್ರಿಯಿಸಿದ್ದಾರೆ.