ಮುಂಬೈ, ಜುಲೈ 6: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮುಂಬೈ–ಪುಣೆ ನಡುವಿನ ರೈಲು ಹಾಗೂ ರಸ್ತೆ ಸಂಚಾರಕ್ಕೆ ಭಾರೀ ಹೊಡೆತ ಬಿದ್ದಿದೆ. ಭೋರ್ ಘಾಟ್ (ಖಂಡಾಲಾ ಘಾಟ್) ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದ ಪ್ರಮುಖ ರೈಲು ಮಾರ್ಗಗಳ ಸಂಚಾರ ಸ್ಥಗಿತಗೊಂಡಿದ್ದು, ಎಕ್ಸ್ಪ್ರೆಸ್ವೇ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲೂ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಕರ್ಜತ್–ಲೋಣಾವಳಾ ನಡುವಿನ ಭೋರ್ ಘಾಟ್ ವಿಭಾಗದಲ್ಲಿ ನಿರಂತರ ಮಳೆಯಿಂದ ಹಲವು ಕಡೆ ಭೂಕುಸಿತ ಸಂಭವಿಸಿದೆ. ಠಾಕುರ್ವಾಡಿ–ಮಂಕಿ ಹಿಲ್ ಲೂಪ್ ಕ್ಯಾಬಿನ್ ನಡುವಿನ ಅಪ್ ಲೈನ್ ಹಾಗೂ ಖಂಡಾಲಾ–ಮಂಕಿ ಹಿಲ್ ನಡುವಿನ ಮಧ್ಯದ ರೈಲು ಹಳಿಯಲ್ಲಿ ಭೂಕುಸಿತ ಉಂಟಾಗಿದೆ. ಮಣ್ಣು, ಬಂಡೆಗಳು ಹಾಗೂ ಮರಗಳು ಹಳಿಗಳ ಮೇಲೆ ಬಿದ್ದ ಪರಿಣಾಮ ಮೂರು ಪ್ರಮುಖ ರೈಲು ಹಳಿಗಳಲ್ಲೂ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಇದರ ಪರಿಣಾಮವಾಗಿ ಸಿಎಸ್ಎಂಟಿ–ಪುಣೆ ಇಂದ್ರಾಯಣಿ ಎಕ್ಸ್ಪ್ರೆಸ್, ಇಂಟರ್ಸಿಟಿ ಎಕ್ಸ್ಪ್ರೆಸ್, ಡೆಕ್ಕನ್ ಎಕ್ಸ್ಪ್ರೆಸ್, ಡೆಕ್ಕನ್ ಕ್ವೀನ್, ಪ್ರಗತಿ ಎಕ್ಸ್ಪ್ರೆಸ್, ಧುಳೆ ಎಕ್ಸ್ಪ್ರೆಸ್ ಸೇರಿದಂತೆ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಸಿಂಹಗಢ ಎಕ್ಸ್ಪ್ರೆಸ್ ಸೇರಿದಂತೆ ಇನ್ನೂ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ದೂರ ಪ್ರಯಾಣದ ಕೆಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ.
ಹಳಿಗಳ ಮೇಲೆ ಬಿದ್ದಿರುವ ಮಣ್ಣು, ಬಂಡೆಗಳು ಹಾಗೂ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ರೈಲ್ವೆ ಸಿಬ್ಬಂದಿ ನಡೆಸುತ್ತಿದ್ದು, ನಿರಂತರ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಪ್ರಯಾಣಿಕರು ತಮ್ಮ ರೈಲುಗಳ ಇತ್ತೀಚಿನ ಸ್ಥಿತಿಯನ್ನು ಪರಿಶೀಲಿಸಿಕೊಂಡು ಮಾತ್ರ ಪ್ರಯಾಣಿಸಲು ರೈಲ್ವೆ ಇಲಾಖೆ ಮನವಿ ಮಾಡಿದೆ.
ಇನ್ನೊಂದೆಡೆ, ಪುಣೆ–ಮುಂಬೈ ಎಕ್ಸ್ಪ್ರೆಸ್ವೇಯ ಎರಡೂ ದಿಕ್ಕಿನ ವಾಹನ ಸಂಚಾರವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಾವಲ್ ಹಾಗೂ ತಾಮ್ಹಿಣಿ ಘಾಟ್ ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕನೆಕ್ಟಿಂಗ್ ಲಿಂಕ್ ಮತ್ತು ಮಿಸ್ಸಿಂಗ್ ಲಿಂಕ್ ನಡುವಿನ ಭಾಗದಲ್ಲಿ ಕಾಂಕ್ರೀಟ್ ಕಂಬ ರಸ್ತೆ ಮೇಲೆ ಕುಸಿದ ಪರಿಣಾಮ ಸಂಚಾರ ಬಂದ್ ಮಾಡಲಾಗಿದೆ. ಹಳೆಯ ಮುಂಬೈ–ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲೂ ಹಲವು ಕಡೆ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.
ಕೇವಲ ಎರಡು ತಿಂಗಳ ಹಿಂದೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದ್ದ 13 ಕಿಲೋಮೀಟರ್ ಉದ್ದದ ಮುಂಬೈ–ಪುಣೆ ಮಿಸ್ಸಿಂಗ್ ಲಿಂಕ್ ಯೋಜನೆಯನ್ನೂ ಭೂಕುಸಿತದ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಬೆಳಗ್ಗೆಯಿಂದಲೇ ಸಂಚಾರ ಮಾರ್ಗ ಬದಲಾವಣೆ ಜಾರಿಗೆ ತಂದಿದ್ದು, ಹೆದ್ದಾರಿ ಪೊಲೀಸರು ಸ್ಥಳದಲ್ಲೇ ನಿಗಾ ವಹಿಸಿದ್ದಾರೆ.
ಮಿಸ್ಸಿಂಗ್ ಲಿಂಕ್ ಬಂದ್ ಆಗಿದ್ದರಿಂದ ಅನೇಕ ವಾಹನಗಳು ಲೋಣಾವಳಾ ಮೂಲಕ ಹಳೆಯ ಮಾರ್ಗವನ್ನು ಬಳಸುತ್ತಿರುವ ಪರಿಣಾಮ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಕೆಲವು ವಾಹನ ಸವಾರರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯಲ್ಲೇ ಸಿಲುಕಿಕೊಂಡಿದ್ದಾರೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಪುಣೆ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳವರೆಗೆ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಅಗತ್ಯವಿಲ್ಲದಿದ್ದರೆ ಪ್ರಯಾಣಿಸದಂತೆ ಹಾಗೂ ಆಡಳಿತದ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದೆ.