ಲಖನೌ, ಆಗಸ್ಟ್ 6: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸಲು ಉದ್ದೇಶಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ನೀಡಲಾಗಿದ್ದ ಅನುಮತಿಯನ್ನು ಕಾಯಸ್ಥ ಪಾಠಶಾಲಾ ಟ್ರಸ್ಟ್ ಹಿಂಪಡೆದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಆಗಸ್ಟ್ 8ರಂದು ನಡೆಯಲಿರುವ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಬೇಕಿತ್ತು. ಆದರೆ ಕಾರ್ಯಕ್ರಮಕ್ಕೆ ಎರಡು ದಿನ ಬಾಕಿ ಇರುವಾಗಲೇ ಕೆಪಿ ಮೈದಾನದ ಮಾಲೀಕತ್ವ ಹೊಂದಿರುವ ಟ್ರಸ್ಟ್ ಅನುಮತಿಯನ್ನು ರದ್ದುಗೊಳಿಸಿದೆ.
ಅಲಹಾಬಾದ್ ಹೈಕೋರ್ಟಿನ 2025ರ ಆಗಸ್ಟ್ 14ರ ಆದೇಶದಂತೆ ಕೆಪಿ ಕಾಲೇಜು ಮೈದಾನವನ್ನು ಕ್ರೀಡೆ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಬಳಸಬಾರದು. ಭಾರಿ ಮಳೆಯಿಂದ ಮೈದಾನದಲ್ಲಿ ನೀರು ನಿಂತಿರುವುದರಿಂದ ಸಾರ್ವಜನಿಕ ಕಾರ್ಯಕ್ರಮಕ್ಕೂ ಅದು ಸುರಕ್ಷಿತವಲ್ಲ ಎಂದು ಟ್ರಸ್ಟ್ನ ಹಂಗಾಮಿ ಅಧ್ಯಕ್ಷ ಜಿತೇಂದ್ರ ನಾಥ್ ಚೌಧರಿ ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದ ಒತ್ತಡದಿಂದಲೇ ಅನುಮತಿ ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ. "ಅವರಿಗೆ ಏನು ಭಯವೋ ತಿಳಿಯುತ್ತಿಲ್ಲ" ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್, "ಅನುಮತಿ ಹಿಂಪಡೆಯಲಾಗಿದ್ದರೂ ಆಗಸ್ಟ್ 8ರಂದು ರಾಹುಲ್ ಗಾಂಧಿ ಪ್ರಯಾಗರಾಜ್ಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಜುಲೈ 30ರಂದೇ ಅನುಮತಿ ಪಡೆದು ₹51 ಸಾವಿರ ಶುಲ್ಕ ಪಾವತಿಸಲಾಗಿತ್ತು" ಎಂದು ತಿಳಿಸಿದ್ದಾರೆ.
ಈ ಹಿಂದೆ ಕೋಟಾ ಮತ್ತು ಡೆಹ್ರಾಡೂನನಲ್ಲೂ ರಾಹುಲ್ ಗಾಂಧಿ ಅವರ ಕಾರ್ಯಕ್ರಮಗಳಿಗೆ ಇದೇ ರೀತಿಯಲ್ಲಿ ಅನುಮತಿ ರದ್ದುಗೊಳಿಸಲಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.