ಹೈದರಾಬಾದ : ಅಮಾನತುಗೊಂಡಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಮುಸ್ಲಿಂ ಸಮುದಾಯದ ಆಕ್ರೋಶ ಮುಗಿಲುಮುಟ್ಟಿದೆ. ರಾಜಾ ಸಿಂಗ್ಗೆ ಜಾಮೀನು ಸಿಕ್ಕಿರುವುದನ್ನು ವಿರೋಧಿಸಿ ರಾತ್ರಿಯಿಡೀ ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ತಲೆಯನ್ನು ದೇಹದಿಂದ ಬೇರ್ಪಡಿಸಿ ಎಂಬ ಘೋಷಣೆಗಳು ಮೊಳಗುತ್ತಲೇ ಇದ್ದವು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸಾಕಷ್ಟು ಯತ್ನಿಸಿದರು. ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ಸಿಆರ್ಪಿಸಿ ಸೆಕ್ಷನ್ 41(ಎ) ಅಡಿಯಲ್ಲಿ ಯಾವುದೇ ನೋಟಿಸ ಶಾಸಕ ರಾಜಾ ಸಿಂಗ್ ಅವರಿಗೆ ನೀಡಲಾಗಿಲ್ಲ ಎಂದು ರಾಜಾ ಸಿಂಗ್ ಪರ ವಕೀಲರು ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕೋರ್ಟ ಎದುರು ವಾದಿಸಿದರು. ವಕೀಲರ ಈ ವಾದವನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯ ಜಾಮೀನನ್ನು ನೀಡಿತ್ತು.
ಜಾಮೀನು ದೊರಕಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ತೆಲಂಗಾಣದಾದ್ಯಂತ ಪ್ರತಿಭಟನೆಗಳು ಮಿತಿಮೀರಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಅಂಬರಪೇಟ, ತಲಬಕಟ್ಟಾ, ಮೊಗಲಪುರ, ಖಿಲ್ವತ್, ಬಹದ್ದೂರ್ಪುರ ಹಾಗೂ ಚಂಚಲಗುಡಾದಲ್ಲಿ ರಾಜಾ ಸಿಂಗ್ ವಿರುದ್ಧ ಪ್ರತಿಭಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಪ್ರತಿಭಟನಾಕಾರರು ಕೋರ್ಟ್ನ ಆದೇಶವನ್ನು ವಿರೋಧಿಸಿ ಬರ್ಕಾಸ್ನಿಂದ ಚಂದ್ರಾಯನಗುಟ್ಟದವರೆಗೆ ಮೆರವಣಿಗೆ ನಡೆಸಿದರು.
ಹೈದರಾಬಾದನ ಶಾಲಿಬಂಡಾದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ ಏರ್ಪಟ್ಟಿತ್ತು. ಪ್ರತಿಭಟನಾಕಾರರು ಪೊಲೀಸ್ ವ್ಯಾನ್ ಧ್ವಂಸಗೊಳಿಸಿದ್ದಾರೆ. ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದು ಮಾತ್ರವಲ್ಲದೇ ರಾಜಾ ಸಿಂಗ್ ಪೋಸ್ಟರ್ಗೆ ಚಪ್ಪಲಿಯಿಂದ ಹೊಡೆದು ಅವರ ಪ್ರತಿಕೃತಿ ದಹಿಸಿದ್ದಾರೆ.
ನೂಪುರ್ ಶರ್ಮಾ ಬೆನ್ನಲ್ಲೇ ತೆಲಂಗಾಣದ ಅಮಾನತುಗೊಂಡಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರು ಪ್ರವಾದಿ ಮೊಹಮ್ಮದ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಈಡಾಗಿದ್ದಾರೆ. ಸಮುದಾಯದ ಭಾವನೆಗೆ ಧಕ್ಕೆಯುಂಟು ಮಾಡಿದ ಆರೋಪದ ಅಡಿಯಲ್ಲಿ ರಾಜಾ ಸಿಂಗ್ರನ್ನು ಬಂಧಿಸಲಾಗಿತ್ತು.