ತುಮಕೂರು: ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಭಾಗಶಃ ಕುಸಿದಿದ್ದ ಸೇತುವೆಯ ಮೇಲೆ ನಿಂತು ವೀಕ್ಷಿಸಿ ತೆರಳಿದ ಐದೇ ನಿಮಿಷದಲ್ಲಿ ಅವರು ನಿಂತುಕೊಂಡಿದ್ದ ಸೇತುವೆ ಭಾಗ ಕುಸಿದಿದೆ.
ನಿನ್ನೆ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತುಮಕೂರು ಜಿಲ್ಲೆಯ ಗೊರವನಹಳ್ಳಿ-ತೀತಾ ರಸ್ತೆಯಲ್ಲಿನ ಸೇತುವೆಯೊಂದು ಭಾಗಶಃ ಕುಸಿದಿತ್ತು. ಮಾಹಿತಿ ತಿಳಿದ ಪರಮೇಶ್ವರ ಸೇತುವೆ ಪರಿಸ್ಥಿತಿಯನ್ನು ವೀಕ್ಷಿಸಲು ಅಧಿಕಾರಿಗಳು ಹಾಗೂ ಇತರರೊಂದಿಗೆ ಅಲ್ಲಿಗೆ ತೆರಳಿದ್ದರು.
ಭಾಗಶಃ ಕುಸಿದಿದ್ದ ಸೇತುವೆ ಮೇಲೆಯೇ ನಿಂತು ವೀಕ್ಷಣೆ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ವೀಕ್ಷಣೆ ಮಾಡಿ ಅವರು ಅಲ್ಲಿಂದ ತೆರಳಿ ಸ್ವಲ್ಪ ದೂರ ಸಾಗುತ್ತಿದ್ದಂತೆ ಸೇತುವೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಸೇತುವೆ ವೀಕ್ಷಿಸಿ ಮುಂದೆ ಹೋದ 5 ನಿಮಿಷಕ್ಕೆ ಸೇತುವೆಯ ಇನ್ನೊಂದು ಭಾಗ ಕುಸಿತಗೊಂಡಿದ್ದು, ಪರಮೇಶ್ವರ ನಿಂತು ವೀಕ್ಷಿಸಿದ್ದ ಸ್ಥಳವೂ ಕುಸಿತಗೊಂಡಿದೆ. ಅದೃಷ್ಟವಶಾತ್, ಅವರು ಹಾಗೂ ಇತರರು ಅಷ್ಟರೊಳಗೇ ಅಲ್ಲಿಂದ ತೆರಳಿದ್ದರಿಂದ ಅನಾಹುತ ತಪ್ಪಿದೆ.