ಬೆಳಗಾವಿ : ಕನಕದಾಸರು ತಮ್ಮ ದಾಸ ಸಾಹಿತ್ಯ, ಕೀರ್ತನೆಗಳ ಮೂಲಕ ಜೀವನಪಾಠ ಸಾರಿದವರು. ಜಾತಿ, ಮತ, ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದಿದಾರೆ ಎಂದು ಎಚ್. ಬಿ ಕೋಲಕಾರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶುಕ್ರವಾರ ನಡೆದ ಭಕ್ತ ಕನಕದಾಸ ಹಾಗೂ ಒನಕೆ ಓಬವ್ವ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಲ ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ತಿಳಿಸಿದ ಅವರ ಕೀರ್ತನೆಗಳು ಸೇರಿದಂತೆ ಹಲವಾರು ಸಾಹಿತ್ಯಗಳು ನಮಗೆ ದಾರಿದೀಪ. ಕನಕದಾಸರ ತತ್ವಆದರ್ಶಗಳು ಇಂದಿಗೂ ಪ್ರಸ್ತುತ. ಅವುಗಳ ಮೂಲಕ ಸಮಾಜದಲ್ಲಿ ಶಾಂತಿ ಸಮಾನತೆ , ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದು ಹೇಳಿದರು.
ಕನಕದಾಸರ ಕೊಡುಗೆ ಅಪಾರ:
ಸಹಜ ಬದುಕು ಬಾಳಿದ ಕನಕದಾಸರು, ಕೀರ್ತನರಾರರಾಗಿ, ತತ್ತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ.
ಇತಿಹಾಸದ ನಾವು ಅಧ್ಯಯನ ಮಾಡಿದರೆ ಶ್ರೀ ಭಕ್ತ ಕನಕದಾಸರು ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ ಎಂಬುದು ತಿಳಿದು ಬರುತ್ತದೆ. ಪ್ರಕೃತಿಯ ಆರಾಧನೆಯ ಕುರಿತು ಬಹಳ ಅಚ್ಚುಕಟ್ಟಗಿ ತಮ್ಮ ಸಾಹಿತ್ಯದ ಮೂಲಕ ಜಗತ್ತಿಗೆ ಪರಿಚಯಿಸಿದ್ದಾರೆ ಎಂದು ಡಾ. ಎಚ್. ಬಿ ಕೋಲಕಾರ ಉಪನ್ಯಾಸದಲ್ಲಿ ತಿಳಿಸಿದರು.
ಒನಕೆ ಓಬವ್ವ ಮಾದರಿ ಮಹಿಳೆ:
ಈ ವೇಳೆ ಒನಕೆ ಓಬವ್ವ ಕುರಿತು ಉಪನ್ಯಾಸ ನೀಡಿದ ಡಾ. ವಿಜಯಲಕ್ಷ್ಮಿ ಪುಟ್ಟಿ ಅವರು, ರಾಜ್ಯ ಸರ್ಕಾರದ ಆದೇಶದಂತೆ ಒನಕೆ ಓಬವ್ವ ಜಯಂತೋತ್ಸವ ಆಚರಣೆ ಮಾಡಲಾಗುತ್ತದೆ. ಚಿತ್ರದುರ್ಗ ಕೋಟೆ, ಅಲ್ಲಿನ ಬೆಟ್ಟ ಗುಡ್ಡ, ಪ್ರಕೃತಿ ಸೌಂದರ್ಯ ಜಗತ್ತಿಗೆ ಚಿರಪರಿಚಿತವಾಗಿದೆ.
ಒನಕೆ ಓಬವ್ವನ ಕುರಿತು ನಾವು ಅನೇಕ ಚಲನಚಿತ್ರಗಳಲ್ಲಿ ನೋಡಿದ್ದೇವೆ.
ಒನಕೆ ಓಬವ್ವ ಈ ನಾಡಿನ ವೀರ ಮಹಿಳೆ, ಕೋಟೆ ಅಕ್ರಮವನ್ನು ತಡೆಯಲು ಹೈದರ ಅಲಿಯ ನೂರಾರು ಸೈನಿಕರನ್ನು ಕೊಂದಳು. ಒನಕೆ ಮೂಲಕ ಶತ್ರು ಪಡೆ ಎದುರಿಸಿದ್ದರಿಂದ ಓಬವ್ವ ಎಂಬ ಹೆಸರಿನಿಂದ ಪ್ರಸಿದ್ಧಳಾದಳು. ಚಿತ್ರದುರ್ಗದ ಕೋಟೆಯ ಒಂದು ಕಿಂಡಿಯಿಂದ ಬರುತ್ತಿದ್ದ ಶತ್ರುಗಳ ಅಕ್ರಮವನ್ನು ತಡೆದು, ಒಬ್ಬ ಸಾಮಾನ್ಯ ಮಹಿಳೆ ಕೂಡ ಈ ನಾಡಿನ ವೀರ ಮಹಿಳೆ ಎಂಬ ಹೆಗ್ಗಳಿಕೆಗೆ ಪತ್ರಳಾದಳು. ಈಗಲೂ ಸಹ ಹೈದರ್ ಅಲಿಯ ಸೈನಿಕರು ಪ್ರವೇಶಿಸಿದ ರಂಧ್ರವನ್ನು ‘ಒನಕೆ ಓಬವ್ವನ ಕಿಂಡಿ’ ಎಂದು ಕರೆಯಲಾಗುತ್ತದೆ ಎಂದು ಡಾ. ವಿಜಯಲಕ್ಷ್ಮಿ ಪುಟ್ಟಿ ಅವರು ಉಪನ್ಯಾಸದಲ್ಲಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬೆಳಗಾವಿ ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಕ್ಷ್ಮಣ ಬಬಲಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಕನಕ ನೌಕರರ ಸಂಘದ ಅಧ್ಯಕ್ಷರು ಅಶೋಕ ಸದಲಗಿ, ಕೆ.ಎಸ್.ಆರ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಬಿ.ಜಿ ಧಾರವಾಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೆರವಣಿಗೆ ಕಾರ್ಯಕ್ರಮ:
ಇದಕ್ಕೂ ಮುಂಚೆ ಶ್ರೀ ಭಕ್ತ ಕನಕದಾಸ ಹಾಗೂ ಒನಕೆ ಒಬ್ಬವ್ವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬುಡಾ ಕಚೇರಿಯ, ಕನಕದಾಸ ವೃತ್ತದಿಂದ ನಗರದ ಕುಮಾರ ಗಂಧರ್ವ ಕಲಾ ಮಂದಿರದ ವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಎಚ್.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ರವೀಂದ್ರ ಗಡಾದಿ, ಪಾಲಿಕೆ ಆಯುಕ್ತ ರುದೇಶ ಘಾಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಹಾಜರಿದ್ದರು.