ಮಲಪ್ಪುರಂ, ಜು. 15: ಕೇರಳದ ಮಲಪ್ಪುರಂ ಜಿಲ್ಲೆಯ ಕುನ್ನುಂಪುರಂನಲ್ಲಿ ಮಿಕ್ಸ್ಚರ್ ಸೇವಿಸುತ್ತಿದ್ದ ವೇಳೆ ಅದರಲ್ಲಿದ್ದ ಕಡಲೆಕಾಯಿ ಗಂಟಲಲ್ಲಿ ಸಿಲುಕಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತ ಬಾಲಕನನ್ನು ಚೆಂಗಣಿ ನಿವಾಸಿಗಳಾದ ಮುನೀರ ಹಾಗೂ ಫರ್ಸಿನಾ ದಂಪತಿಯ ಪುತ್ರ ಮುಹಮ್ಮದ ರಿಝಾನ್ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ಮನೆಯಲ್ಲಿ ಮಿಕ್ಸ್ಚರ್ ತಿನ್ನುತ್ತಿದ್ದ ವೇಳೆ ಅದರಲ್ಲಿದ್ದ ಕಡಲೆಕಾಯಿ ಆಕಸ್ಮಿಕವಾಗಿ ಬಾಲಕನ ಗಂಟಲಲ್ಲಿ ಸಿಲುಕಿದೆ. ಇದರಿಂದ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಬಾಲಕ ಒದ್ದಾಡಲಾರಂಭಿಸಿದ್ದಾನೆ.
ಬಾಲಕನ ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿದ ಪೋಷಕರು ಕೂಡಲೇ ಆತನನ್ನು ಕುನ್ನುಂಪುರಂನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸಲು ಹರಸಾಹಸ ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ಗಂಟಲಲ್ಲಿ ಕಡಲೆಕಾಯಿ ಸಿಲುಕಿ ಉಸಿರಾಟದ ಮಾರ್ಗ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದೇ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಇತ್ತೀಚೆಗೆ ಕೇರಳದಲ್ಲೇ ಅನಸ್ತೇಶಿಯಾ ನೀಡಿದ ಬಳಿಕ 18 ತಿಂಗಳ ಮಗು ಮೃತಪಟ್ಟ ಪ್ರಕರಣವೂ ವರದಿಯಾಗಿದ್ದು, ಸಂಬಂಧಪಟ್ಟ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.