ಬೆಳಗಾವಿ, 15: ನಗರದ ಕ್ಯಾಂಪ್ ಪ್ರದೇಶದ ಯೂನಿಯನ್ ಜಿಮ್ಖಾನಾದಲ್ಲಿ ಮಂಗಳವಾರ ರಾತ್ರಿ ನಡೆದ ಗುಂಡಿನ ದಾಳಿ ಹಾಗೂ ಕೊಲೆ ಯತ್ನ ಪ್ರಕರಣದ ಆರೋಪಿಗಳನ್ನು ಬಂಧಿಸಲು ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿಗಳು ಮತ್ತು ಸಂತ್ರಸ್ತರ ನಡುವಿನ ಹಳೆಯ ದ್ವೇಷವೇ ಗುಂಡಿನ ದಾಳಿಗೆ ಕಾರಣವಾಗಿದೆ. ಇಬ್ಬರೂ ಜೂಜಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧ ಈ ಹಿಂದೆಯೂ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಎಫ್ಐಆರ್ ದಾಖಲಾಗಿವೆ. ಪ್ರಫುಲ್ ಪಾಟೀಲ ತಮ್ಮ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಸುರೇಶ ಜಾಲಗಾರ ದೂರು ನೀಡಿದ್ದಾರೆ. ಮತ್ತೊಂದೆಡೆ, ಕ್ಲಬ್ನ ಆಸ್ತಿಪಾಸ್ತಿಗೆ ಹಾನಿ ಉಂಟುಪಡಿಸಿದ ಆರೋಪದಡಿ ಸುರೇಶ ಜಾಲಗಾರ, ರಾಜು ಕಡೋಲ್ಕರ, ಇಮ್ರಾನ್ ಪಠಾಣ ಹಾಗೂ ಕುಂದರ್ ಯಳ್ಳೂರಕರ ವಿರುದ್ಧ ಕ್ಲಬ್ ವ್ಯವಸ್ಥಾಪಕರು ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ಯೂನಿಯನ್ ಜಿಮ್ಖಾನಾ ರಕ್ಷಣಾ ಇಲಾಖೆಯ ಭೂಮಿಯಲ್ಲಿದ್ದು, ಅದರ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದರೂ ಚಟುವಟಿಕೆ ಮುಂದುವರಿದಿದೆ. ಅಲ್ಲಿನ ಜೂಜಾಟಕ್ಕೆ ಯಾವುದೇ ಅನುಮತಿ ನೀಡಲಾಗಿಲ್ಲ. ಅನುಮತಿ ಇಲ್ಲದೆ ಕ್ಲಬ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿರುವ ಇಂತಹ ಕ್ಲಬ್ಗಳ ಮಾಹಿತಿ ಹಾಗೂ ಅವುಗಳಿಗೆ ನೀಡಿರುವ ಅನುಮತಿಗಳನ್ನೂ ಪರಿಶೀಲಿಸಲಾಗುವುದು ಎಂದು ಕಮಿಷನರ್ ತಿಳಿಸಿದರು.
ಆರೋಪಿ ಪ್ರಫುಲ್ ಪಾಟೀಲ ಮೇಲೆ 2025ರ ಜನವರಿಯಲ್ಲಿ ಗಣೇಶಪುರದ ಬಳಿ ಸುರೇಶ ಜಾಲಗಾರ ಗುಂಡು ಹಾರಿಸಿದ್ದ. ಅದಕ್ಕೆ ಪ್ರತೀಕಾರವಾಗಿ ಈ ಗುಂಡಿನ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಇಬ್ಬರ ವಿರುದ್ಧವೂ ಕೊಲೆ ಯತ್ನ, ದರೋಡೆ, ಜೂಜಾಟ ಸೇರಿದಂತೆ ಹಲವು ಪ್ರಕರಣಗಳಿದ್ದು, ಘಟನೆಯಲ್ಲಿ ಬಳಸಲಾದ ಎರಡು ಪಿಸ್ತೂಲ್ಗಳ ಮೂಲದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಏನಿದು ಘಟನೆ?
ನಗರದ ಬೆಳಗಾವಿ ಪೊಲೀಸ ಆಯುಕ್ತರ ಕಚೇರಿ ಎದುರಿಗೆ ಇರುವ ಕ್ಯಾಂಪ್ ಪ್ರದೇಶದಲ್ಲಿನ ಯೂನಿಯನ್ ಜಿಮಖಾನಾ ಕ್ಲಬ್ನಲ್ಲಿ ಇಸ್ಪೀಟ್ ಆಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ರಿವಾಲ್ವರ್ನಿಂದ ಗುಂಡು ಹಾರಿಸಿ ಕೊಲೆ ಯತ್ನ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆ ವೇಳೆ ಕ್ಲಬ್ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸುರೇಶ ಜಾಲಗಾರ ಎಂಬಾತನನ್ನು ಗುರಿಯಾಗಿಸಿಕೊಂಡು ಐವರು ಆರೋಪಿಗಳು ಕ್ಲಬ್ಗೆ ಬಂದಿದ್ದರು. ಅವರಲ್ಲಿ ಇಬ್ಬರು ಹೊರಗೆ ಕಾವಲು ನಿಂತಿದ್ದರೆ, ಮೂವರು ಕ್ಲಬ್ನೊಳಗೆ ನುಗ್ಗಿ ಸುರೇಶ ಜಾಲಗಾರ ಮೇಲೆ ಹಲ್ಲೆ ನಡೆಸಿದ್ದಾರೆ.
ಆರೋಪಿಗಳು ಮೊದಲು ಪಿಸ್ತೂಲ್ನಿಂದ ತಲೆಗೆ ಹಲ್ಲೆ ನಡೆಸಿ, ಬಳಿಕ ಗುಂಡು ಹಾರಿಸಲು ಯತ್ನಿಸಿದ್ದಾರೆ. ಈ ವೇಳೆ ಸುರೇಶ ಜಾಲಗಾರ ಆರೋಪಿಗಳನ್ನು ತಳ್ಳಿಕೊಂಡು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಆರೋಪಿಗಳು ಕ್ಲಬ್ನಿಂದ ಹೊರಬಂದು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕ್ಯಾಂಪ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಸುರೇಶ ಜಾಲಗಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
"ಈ ಹಿಂದೆ ನಾನು ಪ್ರಫುಲ್ ಪಾಟೀಲ ಎಂಬಾತನ ಮೇಲೆ ಗುಂಡು ಹಾರಿಸಿದ್ದೆ. ಅದಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪ್ರಫುಲ್ ಪಾಟೀಲ ಕಡೆಯವರು ನನ್ನ ಮೇಲೆ ಹತ್ಯೆಗೆ ಯತ್ನ ನಡೆಸಿದ್ದಾರೆ" ಎಂದು ಸುರೇಶ ಜಾಲಗಾರ ಪೊಲೀಸರಿಗೆ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.