ಬಾಗಲಕೋಟ, 15: ಮಹಿಳಾ ಸಂಘಟನೆಯ ಹೆಸರಲ್ಲಿ ಸಾರ್ವಜನಿಕರಿಂದ ಹೂಡಿಕೆ ಸಂಗ್ರಹಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಬಂಧಿತರನ್ನು ರಚನಾ ಬಂಟನೂರ ಹಾಗೂ ವಿದ್ಯಾಶ್ರೀ ಹಲ್ಲೂರು ಎಂದು ಗುರುತಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೀಳಗಿ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ’ ಸಾರ್ವಜನಿಕರಿಗೆ ಆಕರ್ಷಕ ಲಾಭಾಂಶದ ಭರವಸೆ ನೀಡಿ ಹಣ ಸಂಗ್ರಹಿಸಿ ವಂಚಿಸಿರುವ ಕುರಿತು ಬೀಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಗ್ರಾಮೀಣ ಭಾಗದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸಣ್ಣ ಗುಂಪುಗಳನ್ನು ರಚಿಸಿದ್ದ ಸಂಸ್ಥೆ, ಮೂರು ವರ್ಷಗಳ ಬಳಿಕ ಹೆಚ್ಚಿನ ಮೊತ್ತವನ್ನು ಮರಳಿಸುವುದಾಗಿ ನಂಬಿಸಿತ್ತು. ಇದನ್ನು ನಂಬಿದ ನೂರಾರು ಮಹಿಳೆಯರು ತಮ್ಮ ದುಡಿಮೆಯ ಹಣವನ್ನು ವಾರದ ಹಾಗೂ ತಿಂಗಳ ಕಂತುಗಳ ರೂಪದಲ್ಲಿ ಹೂಡಿಕೆ ಮಾಡಿದ್ದರು.
ಸಂತ್ರಸ್ತ ಮಹಿಳೆಯರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸಂಸ್ಥೆಯ ಕಚೇರಿಯ ಮೇಲೆ ದಾಳಿ ನಡೆಸಿ, ಅಕ್ರಮ ವ್ಯವಹಾರಕ್ಕೆ ಬಳಸಲಾಗುತ್ತಿದ್ದ 200ಕ್ಕೂ ಹೆಚ್ಚು ರಿಜಿಸ್ಟರ್ಗಳು, ರಸೀದಿ ಪುಸ್ತಕಗಳು, ಕಂಪ್ಯೂಟರ್ಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸಹಕಾರ ಸಂಘಗಳ ಜಿಲ್ಲಾ ನಿಬಂಧಕರು ಸ್ಥಳಕ್ಕೆ ಭೇಟಿ ನೀಡಿ ಜಪ್ತಿ ಮಾಡಲಾದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ವಶಪಡಿಸಿಕೊಂಡ ದಾಖಲೆಗಳು ಮತ್ತು ಸಂತ್ರಸ್ತರ ಹೇಳಿಕೆಗಳ ಆಧಾರದ ಮೇಲೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸುಮಾರು ₹43.40 ಲಕ್ಷ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಂಸ್ಥೆಯ ಅಧಿಕೃತ ಆಡಿಟರ್ ಸೇರಿ ಒಟ್ಟು ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.