ಹೊಸದಿಲ್ಲಿ: 2002ರ ಗುಜರಾತ್ ನರಸಂಹಾರದ ಬಳಿಕ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ್ದಾರೆ ಎಂಬ ಆರೋಪದಲ್ಲಿ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತೆ, ಕೋಮು ಗಲಭೆ ಸಂತ್ರಸ್ತರ ಪರ ದಶಕಗಳಿಂದ ಹೋರಾಟ ನಡೆಸುತ್ತ ಬಂದಿರುವ ತೀಸ್ತಾ ಸೆತಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ.
ತೀಸ್ತಾ ಅವರು ಜೂನ್ನಿಂದಲೂ ಜೈಲಿನಲ್ಲಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರಿಗೆ ಈಗಾಗಲೇ ಸಾಕಷ್ಟು ಸಮಯ ಸಿಕ್ಕಿದೆ ಎಂದು ಕೋರ್ಟ್ ಗುಜರಾತ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ತೀಸ್ತಾ ಅವರನ್ನು ಗುಜರಾತ್ನ ಭಯೋತ್ಪಾದನಾ ನಿಗ್ರಹ ಘಟಕವು ಜೂನ್ 25ರಂದು ಬಂಧಿಸಿತ್ತು.
ಅವರ ಜಾಮೀನು ಅರ್ಜಿಯ ಅಂತಿಮ ನಿರ್ಧಾರವನ್ನು ಗುಜರಾತ್ ಹೈಕೋರ್ಟ್ ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಹೇಳಿದೆ. ಆದರೆ ಅದರೊಳಗೆ ತೀಸ್ತಾ ಅವರಿಗೆ ಜೈಲಿನಿಂದ ಬಿಡುಗಡೆ ಸಿಗಲಿದೆ. ಯಾವುದೇ ಸ್ಥಳೀಯ ಶ್ಯೂರಿಟಿಗಳಿಲ್ಲದೆ ತೀಸ್ತಾ ಅವರನ್ನು ಶನಿವಾರ ಬಿಡುಗಡೆ ಮಾಡುವಂತೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಉದಯ ಲಲಿತ ಮತ್ತು ನ್ಯಾ. ಎಸ್ ರವೀಂದ್ರ ಭಟ್ ಹಾಗೂ ನ್ಯಾ. ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠ ಈ ಆದೇಶ ನೀಡಿದೆ.
ತಮ್ಮ ಪಾಸಪೋರ್ಟ ಒಪ್ಪಿಸುವಂತೆ ಮತ್ತು ತನಿಖೆಗೆ ಸಹಕಾರ ನೀಡುವಂತೆ ತೀಸ್ತಾ ಅವರಿಗೆ ಕೋರ್ಟ್ ನಿರ್ದೇಶನ ನೀಡಿದೆ.