ಹಾವೇರಿ: ಹಾವೇರಿ ತಹಶೀಲ್ದಾರ ಗಿರೀಶ್ ಸ್ವಾದಿ ಅವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಿರೀಶ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಅ. 31 ರಂದು ರಾತ್ರಿ 9:30ಕ್ಕೆ ಗಿರೀಶ ಅವರ ಪತ್ನಿ ಭಾಗ್ಯಶ್ರೀ ಅವರಿಗೆ ಕೊನೆಯ ಬಾರಿ ಕರೆ ಮಾಡಿದ್ದಾರೆ. ಪರಿಚಯಸ್ಥರಾದ ಬೆಳಗಾವಿಯ ಜಹೂರ ಅಂಗಡಿ ಅವರ ಮೊಬೈಲ್ ನಿಂದ ಕರೆ ಮಾಡಿದ್ದ ಗಿರೀಶ ರಾತ್ರಿ ಮನೆಗೆ ಬರುವುದಿಲ್ಲ. ನ. 1 ರ ಕನ್ನಡ ರಾಜ್ಯೋತ್ಸವ ಇರುವುದರಿಂದ ಹಾವೇರಿ ಪ್ರವಾಸಿ ಮಂದಿರದಲ್ಲಿ, ಇಲ್ಲವೇ ಹಾನಗಲ್ ಖಾಸಗಿ ರೆಸಿಡೆನ್ಸಿಯಲ್ಲಿ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದರು ಎನ್ನಲಾಗಿದೆ.
ವಾಹನ ಚಾಲಕ ನ. 1 ರಂದು ಬೆಳಿಗ್ಗೆ 6 ಗಂಟೆಗೆ ಸಿದ್ದೇಶ್ವರ ನಗರದಲ್ಲಿರುವ ತಹಶೀಲ್ದಾರ ಮನೆಗೆ ಬಂದು ವಿಚಾರಿಸಿದಾಗ ರಾತ್ರಿ ಮನೆಗೆ ಬಂದಿಲ್ಲ ಎಂದು ಪತ್ನಿ ತಿಳಿಸಿದ್ದಾರೆ. ನಂತರ ಕುಟುಂಬದವರು ಮತ್ತು ಕಚೇರಿ ಸಿಬ್ಬಂದಿ ವಿಚಾರಿಸಿದಾಗ ನ. 1 ರ ಬೆಳಗಿನ ಜಾವ 5 ಗಂಟೆಗೆ 112ನೇ ರೂಮ್ ಖಾಲಿ ಮಾಡಿ ಹೋಗಿರುವುದಾಗಿ ಖಾಸಗಿ ರೆಸಿಡೆನ್ಸಿ ಸಿಬ್ಬಂದಿ ತಿಳಿಸಿದ್ದಾರೆ ಎನ್ನಲಾಗಿದೆ.
ತಹಶೀಲ್ದಾರ ಗಿರೀಶ ಅನಾರೋಗ್ಯದ ಕಾರಣ ನ. 3 ರಿಂದ ಒಂದು ತಿಂಗಳು ರಜೆ ಹಾಕಿದ್ದು, ಬ್ಯಾಡಗಿ ತಹಶೀಲ್ದಾರಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ.
ತಹಶೀಲ್ದಾರ ಗಿರೀಶ 3 ದಿನದಿಂದ ನಾಪತ್ತೆಯಾಗಿ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಪೊಲೀಸರಿಗೆ ದೂರು ನೀಡಲಾಗಿದೆ.