ಇಂಡಿ : ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಡುವ ಕಾರಣ ಅಮಾಯಕ ನಾಗರಿಕರು ಇದಕ್ಕೆ ಬಲಿಯಾಗುತ್ತಿದ್ದು ಇಂಥ ಇನ್ನೊಂದು ಘಟನೆ ನಡೆದಿದೆ. ಕಳ್ಳರು ಎಂದು ಭಾವಿಸಿ ಕಾರ್ಮಿಕರನ್ನು ಕಟ್ಟಿಹಾಕಿ ಮನಬಂದಂತೆ ಥಳಿಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊಸಮನಿ ಹಟ್ಟಿಯಲ್ಲಿ ನಡೆದಿದೆ.
ತಮಿಳುನಾಡಿನಿಂದ ಕೆಲಸಕ್ಕೆಂದು ಗ್ರಾಮಕ್ಕೆ 12 ಮಂದಿ ಕಾರ್ಮಿಕರು ಬಂದಿದ್ದರು. ಇದನ್ನು ನೋಡಿದ ಗ್ರಾಮಸ್ಥರು ಅವರನ್ನು ಕಳ್ಳರು ಎಂದು ಭಾವಿಸಿ ಹಿಡಿಯಲು ಹೋಗಿದ್ದಾರೆ, ಆದರೆ 10 ಮಂದಿ ಕಾರ್ಮಿಕರು ಜನರ ಕೈಗೆ ಸಿಕ್ಕಿಹಾಕಿಕೊಂಡಿದ್ದು, ಗ್ರಾಮಸ್ಥರು ಅವರನ್ನು ಕಟ್ಟಿ ಹಾಕಿ ಮನಸೋ ಇಚ್ಚೆ ಥಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಕಾರ್ಮಿಕರನ್ನು ವಿಚಾರಿಸಿದಾಗ ಅವರು ಕಳ್ಳರಲ್ಲ, ಬದಲಾಗಿ ಕಾರ್ಮಿಕರು ಎಂದು ತಿಳಿದು ಬಂದಿದೆ. ಇಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.